ಬೆಂಗಳೂರು: ಗ್ರಾಹಕರೊಬ್ಬರ ಜೊತೆ ಟೆಸ್ಟ್ ಡ್ರೈವ್ನಲ್ಲಿದ್ದ ವೇಳೆ ಕಾರು ಮಳಿಗೆಯ ಸೇಲ್ಸ್ ಕನ್ಸಲ್ಟೆಂಟ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಕಲ್ಯಾಣಿ ಮೋಟಾರ್ಸ್ ಕಾರು ಶೋರೂಂ ಉದ್ಯೋಗಿ ರಾಂಪುರ ನಿವಾಸಿ ಸುಬ್ರಮಣಿ (51) ಮೃತಪಟ್ಟವರು.
ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಡುಗೋಡಿ ರೈಲು ನಿಲ್ದಾಣದ ಮುಂಭಾಗದಲ್ಲಿ ಗ್ರಾಹಕರೊಬ್ಬರ ಜೊತೆ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸುಬ್ರಮಣಿ ಅವರಿಗೆ ಲಘು ಹೃದಯಾಘಾತ ಉಂಟಾಗಿತ್ತು. ತಕ್ಷಣ ಅವರನ್ನು ಸಮೀಪದ ಆ್ಯಕ್ಸಿಸ್ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ಮೃತದೇಹವನ್ನು ವೈದೇಹಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಬುಧವಾರ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಕಾಡುಗೋಡಿ ಠಾಣೆಯ ಪೊಲೀಸರು ತಿಳಿಸಿದರು. ಸುಬ್ರಮಣಿ ಅವರ ಮಗ ಶಶಾಂಕ್ ನೀಡಿದ ದೂರಿನ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.