ಬೆಂಗಳೂರು: ಕೊರೊನಾ ಸೋಂಕು ಕಾರ್ಮಿಕರಿಗೆ ಹರಡದಂತೆ ಕೈಗಳಿಗೆ ಸೋಂಕು ನಿವಾರಕ ದ್ರಾವಣದಿಂದ ಕೈತೊಳೆಯಿಸಿ, ಥರ್ಮಲ್ ಸ್ಕ್ಯಾನ್ ಮೂಲಕ ತಪಾಸಣೆ ನಡೆಸಿ ಕಾರ್ಖಾನೆಯ ಒಳಕ್ಕೆ ಬಿಡುವುದನ್ನು ನೋಡಿದ್ದೇವೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಆದಿತ್ಯ ಆಟೊ ಪ್ರಾಡಕ್ಟ್ಸ್ ಕಂಪನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಕಾರ್ಮಿಕರ ಇಡೀ ದೇಹಕ್ಕೆಸೋಂಕು ನಿವಾರಕ (ಸ್ಯಾನಿಟೈಸರ್) ಮತ್ತು ಆಲ್ಕೋಹಾಲ್ಭರಿತ ದ್ರಾವಣ ಸಿಂಪಡಣೆ ಮಾಡುತ್ತಿದೆ.
ಕಂಪನಿಯಲ್ಲಿ 500 ಕಾರ್ಮಿಕರಿದ್ದು, ಒಳಕ್ಕೆ ಬರುವ ಮುನ್ನ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ದೇಹದಲ್ಲಿ 99 ಡಿಗ್ರಿ ಫ್ಯಾರನ್ಹೀಟ್ಗಿಂತ ಕಡಿಮೆ ಉಷ್ಣಾಂಶ ಇದ್ದರೆ ಮಾತ್ರ ಒಳಕ್ಕೆ ಬಿಡಲಾಗುತ್ತದೆ. ಅದಕ್ಕೂ ಮುನ್ನ ಇಡೀ ದೇಹಕ್ಕೆ ಸಿಂಪಡಣೆ ಮಾಡಲಾಗುತ್ತಿದೆ. ಕಂಪನಿಗೆ ಭೇಟಿ ನೀಡುವ ಸಂದರ್ಶಕರಿಗೂ ಇದೇ ಮಾದರಿ ಅನುಸರಿಸಲಾಗುತ್ತಿದೆ.
‘ಆದಿತ್ಯ ಕಂಪನಿ ದೊಡ್ಡಬಳ್ಳಾಪುರದಲ್ಲಿ ಮುಖ್ಯ ಶಾಖೆ ಹೊಂದಿದ್ದು, ಬೊಮ್ಮಸಂದ್ರ, ಪುಣೆ, ತಮಿಳುನಾಡು ಮತ್ತು ಹಿರಿಯಾಣದಲ್ಲೂ ಶಾಖೆಗಳನ್ನು ಹೊಂದಿದೆ. ಎಲ್ಲಾ ಕಡೆಗಳಲ್ಲೂ ಇದೇ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ರಮೇಶ್ ಪೈ ತಿಳಿಸಿದರು.