ಬೆಂಗಳೂರು: ಬೆಳ್ಳಂದೂರಿನ ವೇಣುಗೋಪಾಲಸ್ವಾಮಿ ದೇವಸ್ಥಾನ ಸಮೀಪದಲ್ಲಿರುವ ಖಾಲಿ ನಿವೇಶನದಲ್ಲಿ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದ್ದು, ಆ ದೇಹವನ್ನು ನಾಯಿಯೊಂದು ಎಳೆದಾಡಿ ವಿಕಾರಗೊಳಿಸಿದೆ.
ಮೃತದೇಹಕ್ಕೆ ಬಾಯಿ ಹಾಕಿ ಕಚ್ಚುತ್ತಿದ್ದ ನಾಯಿಯನ್ನು ಕಂಡ ಸ್ಥಳೀಯರು, ಸ್ಥಳಕ್ಕೆ ಹೋಗಿ ಅದನ್ನು ಓಡಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ಪೊಲೀಸರು, ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದರು.
‘ಸ್ಥಳೀಯ ಮಹಿಳೆಯೊಬ್ಬರು ಮನೆ ಬಳಿ ಬಟ್ಟೆ ಒಣಗಿಸಲು ಹೋದಾಗ, ಪ್ಲಾಸ್ಟಿಕ್ ಚೀಲವನ್ನು ನಾಯಿಯೊಂದು ಎಳೆದಾಡುತ್ತಿದ್ದದ್ದನ್ನು ನೋಡಿದ್ದರು. ಚೀಲದಿಂದ ಶಿಶುವಿನ ತಲೆ ಹೊರಬಂದಿದ್ದನ್ನು ಕಂಡು ಗಾಬರಿಯಾಗಿ ಸ್ಥಳಕ್ಕೆ ಓಡಿಹೋಗಿದ್ದರು. ನಾಯಿಯನ್ನು ಸ್ಥಳ ದಿಂದ ಓಡಿಸಿ ನೋಡಿದಾಗ ಚೀಲದಲ್ಲಿ ಮೃತದೇಹ ಕಂಡಿತ್ತು’ ಎಂದು ಬೆಳ್ಳಂದೂರು ಪೊಲೀಸರು ಹೇಳಿದರು.
‘ಯಾರೋನವಜಾತ ಶಿಶುವಿನ ಮೃತದೇಹವನ್ನು ಖಾಲಿ ನಿವೇಶನದಲ್ಲಿ ಎಸೆದು ಹೋಗಿದ್ದಾರೆ. ಅವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಮಹಿಳೆ ನೋಡದಿದ್ದರೆ ಮೃತದೇಹವನ್ನು ನಾಯಿಯೇ ಕಚ್ಚಿ ಚಿಲ್ಲಾಪಿಲ್ಲಿ ಮಾಡುವ ಸಾಧ್ಯತೆ ಇತ್ತು’ ಎಂದು ತಿಳಿಸಿದರು.