ಬೆಂಗಳೂರು: ದೊಮ್ಮಲೂರು 2ನೇ ಹಂತದ ‘ಅಮ್ಮಾ ಭಗವಾನ್’ ದೇವಾಲಯದ ಎದುರು ಕಸದ ತೊಟ್ಟಿ ನಿರ್ಮಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕಸದ ತೊಟ್ಟಿ ಸ್ಥಳಾಂತರ ಕೋರಿ ಭಕ್ತರಾದ ನರಸಿಂಹಮೂರ್ತಿ ಸೇರಿದಂತೆ 11 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಬಿಬಿಎಂಪಿ ಪರ ವಕೀಲ ಎಸ್.ಎಚ್.ಪ್ರಶಾಂತ್, ‘ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಲು ಒಂದಿಷ್ಟು ಕಾಲಾವಕಾಶ ಬೇಕು’ ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮುಂದಿನ ವಿಚಾರಣೆ ವೇಳೆಗೆ ಬಿಬಿಎಂಪಿ ಬೆಂಗಳೂರಿನ ಸ್ವಚ್ಛತೆಯ ಕುರಿತು ವಸ್ತುನಿಷ್ಠ ಹಾಗೂ ಸಮರ್ಥನೀಯ ಕ್ರಮ ಕೈಗೊಂಡಿರಬೇಕು’ ಎಂದು ಹೇಳಿತು.
ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಲಾಗಿದೆ.
‘ದೇವಸ್ಥಾನದ ಆಡಳಿತ ಮಂಡಳಿಗೆ ಯಾವುದೇ ನೋಟಿಸ್ ನೀಡದೆ ದೇವಸ್ಥಾನದ ಪ್ರವೇಶ ದ್ವಾರದ ಹತ್ತಿರ ಕಸದ ತೊಟ್ಟಿ ನಿರ್ಮಿಸಲಾಗಿದೆ. ಇದರಿಂದ ಭಕ್ತರಿಗೆ ತೊಂದರೆ ಆಗುತ್ತಿದೆ’ ಎಂಬುದು ಅರ್ಜಿದಾರರ ಆಕ್ಷೇಪ.