ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪುರ ಮೇಲ್ಸೇತುವೆ: ಬಿಬಿಎಂಪಿಯಿಂದ ಮತ್ತೆ ವಿಳಂಬ

ನಾಲ್ಕನೇ ಬಾರಿ ಟೆಂಡರ್‌; ಸರ್ಕಾರದ ಅನುಮೋದನೆಗೆ ಕಳುಹಿಸಲು ಮೀನಮೇಷ
Published 2 ಜೂನ್ 2023, 23:04 IST
Last Updated 2 ಜೂನ್ 2023, 23:04 IST
ಅಕ್ಷರ ಗಾತ್ರ

ಬೆಂಗಳೂರು: ಈಜಿಪುರ ಮೇಲ್ಸೇತುವೆಯ ಬಾಕಿ ಕಾಮಗಾರಿಗೆ ನಾಲ್ಕನೇ ಬಾರಿಗೆ ಕರೆದಿರುವ ಟೆಂಡರ್‌ ಪ್ರಕ್ರಿಯೆಯನ್ನು ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ, ಸಾರಿಗೆ ಸಚಿವರು ನಾಲ್ಕಾರು ಬಾರಿ ಹೇಳಿದ್ದರೂ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಿಲ್ಲ.

ಈಜಿಪುರ ಮೇಲ್ಸೇತುವೆ ಬಾಕಿ ಉಳಿದಿರುವ ಕಾಮಗಾರಿಗೆ ನಾಲ್ಕನೇ ಬಾರಿಗೆ ಮಾರ್ಚ್‌ 1ರಂದು ಟೆಂಡರ್‌ ಆಹ್ವಾನಿಸಿತ್ತು. 17ರಂದು ತಾಂತ್ರಿಕ ಬಿಡ್‌ ತೆರೆದು, ಏಕೈಕ ಅರ್ಹ ಬಿಡ್‌ದಾರರೊಂದಿಗೆ ಮಾತುಕತೆ ನಡೆಸಲಾಗಿತ್ತು. ಅದನ್ನು ಇನ್ನೂ ಪೂರ್ಣಗೊಳಿಸದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಮಾರ್ಚ್‌ 17ರಂದು ಕರೆದಿದ್ದ ಹೈಡೆನ್ಸಿಟಿ ಕಾರಿಡಾರ್‌ ಟೆಂಡರ್‌ಗೆ ಮಾರ್ಚ್‌ 23ರಂದೇ ಅನುಮೋದನೆ ನೀಡಿ, ಕಾರ್ಯಾದೇಶವನ್ನೂ ನೀಡಲಾಗಿದೆ.

2017ರಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು, ಗುತ್ತಿಗೆದಾರರ ವಿಳಂಬದಿಂದ ‌ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತು. ಗುತ್ತಿಗೆಯನ್ನು 2022ರ ಮಾರ್ಚ್‌ 9ರಂದು ರದ್ದುಪಡಿಸಲಾಗಿತ್ತು. ಹೈಕೋರ್ಟ್‌ ಮೂರು ತಿಂಗಳಲ್ಲಿ ಮರು ಟೆಂಡರ್‌ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿತು. ಇಷ್ಟಾದರೂ ಈವರೆಗೆ ಬಿಬಿಎಂಪಿ ಟೆಂಡರ್‌ ಪ್ರಕ್ರಿಯೆಯನ್ನೇ ಇನ್ನೂ ಪೂರ್ಣಗೊಳಿಸಿಲ್ಲ.

‘ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡಿದ್ದರಿಂದ ಟೆಂಡರ್‌ ಪ್ರಕ್ರಿಯೆಯನ್ನು ಸರ್ಕಾರ ರದ್ದುಪಡಿಸಲು ಸೂಚಿಸಿತ್ತು. ನಂತರ ಹೊಸದಾಗಿ ಟೆಂಡರ್‌ ಕರೆಯಲಾಗಿತ್ತು. ಇಬ್ಬರು ಗುತ್ತಿಗೆದಾರರು ಬಿಡ್‌ ಮಾಡಿದ್ದರು. ಅದರಲ್ಲಿ ಒಬ್ಬರಿಗೆ ಅರ್ಹತೆ ಇರಲಿಲ್ಲ. ಅವರು ದಾಖಲಿಸಿರುವ ಮೊತ್ತವನ್ನು ಕಡಿಮೆ ಮಾಡಲು ಮನವಿ ಮಾಡಲಾಗಿದೆ. ಅವರು ಅದಕ್ಕೆ ಸಮ್ಮತಿಸಿದ ಮೇಲೆ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ಬಂದ ಮೇಲೆ ಕಾಮಗಾರಿ ಆರಂಭಿಸಲಾಗುತ್ತದೆ. ಇದು ಮುಂದುವರಿದ ಕಾಮಗಾರಿ ಆಗಿರುವುದರಿಂದ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾರ್ಚ್‌ನಲ್ಲಿ ತಿಳಿಸಿದ್ದರು. ಆದರೆ, ಜೂನ್‌ ಆರಂಭವಾಗಿದ್ದರೂ ಸರ್ಕಾರಕ್ಕೆ ಕಡತ ಸಲ್ಲಿಕೆಯಾಗಿಲ್ಲ.

‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿ ಮುಗಿಸದೆ ಸ್ಥಳೀಯ ಜನರು ಸಂಕಷ್ಟದಲ್ಲಿದ್ದಾರೆ. ಶಾಸಕ ರಾಮಲಿಂಗಾರೆಡ್ಡಿ ಅವರೊಂದಿಗೆ ನಾವು ಪ್ರತಿಭಟನೆಯನ್ನೂ ಮಾಡಿದ್ದೆವು. ಇದೀಗ ಅವರು ಸಚಿವರಾಗಿದ್ದಾರೆ. ಬೇಗ ಕಾಮಗಾರಿ ಮುಗಿಸಲಿ’ ಎಂದು ಕೋರಮಂಗಲ ಎಸ್‌ಟಿ ಬೆಡ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು ಒತ್ತಾಯಿಸಿದರು.

ಪರಿಶೀಲನೆ: ‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯ ಟೆಂಡರ್‌ ಪರಿಶೀಲನೆ ನಡೆಯುತ್ತಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದರು.

ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
ಮುಖ್ಯ ಆಯುಕ್ತರಿಗೆ ಹೇಳಿದ್ದರೂ ಕ್ರಮವಾಗಿಲ್ಲ: ರಾಮಲಿಂಗಾರೆಡ್ಡಿ
‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯ ಟೆಂಡರ್‌ ನಾಲ್ಕನೇ ಬಾರಿಗೆ ಕರೆಯಲಾಗಿದ್ದು ಎಲ್ಲ ತಾಂತ್ರಿಕ ಪ‍್ರಕ್ರಿಯೆ ಮುಗಿಸಲಾಗಿದೆ. ಅಂತಿಮ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಿ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಅವರಿಗೆ ನಾಲ್ಕಾರು ಬಾರಿ ಹೇಳಿದ್ದೇನೆ. ಅವರು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ‘ಈಜಿಪುರ ಮೇಲ್ಸೇತುವೆ ಬಾಕಿ ಕಾಮಗಾರಿಯನ್ನು ಬಿಜೆಪಿ ಸರ್ಕಾರ ನಮ್ಮ ಮೇಲಿನ ದ್ವೇಷದಿಂದ ಮುಂದುವರಿಸಲಿಲ್ಲ. ಈ ಕಾಮಗಾರಿಯನ್ನು ನಮ್ಮ ಸರ್ಕಾರ ಬಂದ ಕೂಡಲೇ ಮುಂದುವರಿಸಿ 12 ತಿಂಗಳಲ್ಲಿ ಮುಗಿಸುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಆದರೆ ಬಿಬಿಎಂಪಿ ಅಧಿಕಾರಿಗಳು  ಇದಕ್ಕೆ ಸ್ಪಂದಿಸುತ್ತಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಟೆಂಡರ್‌ ಅನುಮೋದನೆ ನೀಡಿ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT