ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಅಳಿಯನಿಗೆ ‘ಸುಪ್ರೀಂ’ ಜಾಮೀನು

Last Updated 9 ಆಗಸ್ಟ್ 2022, 5:53 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಅಳಿಯನಿಗೆ (ಸಾಫ್ಟ್‌ವೇರ್ ಎಂಜಿನಿಯರ್) ಸುಪ್ರೀಂಕೋರ್ಟ್‌ ಸೋಮವಾರ ಜಾಮೀನು ನೀಡಿದೆ.

ತಿಗಳರಪಾಳ್ಯದಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧುರಾಣಿ (33) ಹಾಗೂ ಮಧುಸಾಗರ್ (25) ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಧೂರಾಣಿ ಅವರ ಒಂಬತ್ತು ತಿಂಗಳ ಮಗು ಸಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ‘ಮಗುವಿನದ್ದು ಕೊಲೆ’ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು.

ನಾಲ್ವರ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಬ್ಯಾಡರಹಳ್ಳಿ ಪೊಲೀಸರು, ಭಾರತಿ ಅವರ ಪತಿಯಾದ ಪತ್ರಕರ್ತ ಹಲ್ಲೇಗೆರೆ ಶಂಕರ್ ಹಾಗೂ ಇಬ್ಬರು ಅಳಿಯಂದಿರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಳಿಯ ಇ.ಎಸ್‌.ಪ್ರವೀಣ್‌ ಕುಮಾರ್ ಅವರನ್ನು 2021ರ ಅಕ್ಟೋಬರ್ 1ರಂದು ಬಂಧಿಸಿದ್ದರು. ಪ್ರವೀಣ್ ಕುಮಾರ್ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿತ್ತು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿ ಜಾಮೀನು ಅರ್ಜಿಯನ್ನು ಅಂಗೀಕರಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವೇಣುಗೋಪಾಲ ಗೌಡ ಹಾಗೂ ವಕೀಲ ಬಾಲಾಜಿ ಶ್ರೀನಿವಾಸನ್‌ ವಾದಿಸಿದರು. ಕರ್ನಾಟಕ ಸರ್ಕಾರದ ಪರವಾಗಿ ವಿ.ಎನ್‌.ರಘುಪತಿ ವಾದ ಮಂಡಿಸಿದರು. ಅರ್ಜಿದಾರರ ಕಿರಿಯ ಮಗುವು ತಾಯಿಯನ್ನು ಕಳೆದುಕೊಂಡಿದೆ ಹಾಗೂ ತಂದೆಯು ಪೊಲೀಸ್‌ ವಶದಲ್ಲಿದ್ದಾರೆ. ಹಾಗಾಗಿ, ತಂದೆಗೆ ಜಾಮೀನು ನೀಡಬೇಕು ಎಂದು ವೇಣುಗೋಪಾಲ ಗೌಡ ಮನವಿ ಮಾಡಿದರು.

ಇದೊಂದು ದುರದೃಷ್ಟಕರ ಘಟನೆ. ಅರ್ಜಿದಾರನ ಪತ್ನಿ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT