ಬೆಂಗಳೂರು: ‘ನಗರದಲ್ಲಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದ್ದ 500ಕ್ಕೂ ಅಧಿಕ ಪ್ರದೇಶಗಳಿದ್ದವು. ಅವುಗಳ ಸಂಖ್ಯೆ ಈಗ 209ಕ್ಕೆ ಇಳಿದಿದೆ. 58 ಅತಿಸೂಕ್ಷ್ಮ ಪ್ರದೇಶಗಳನ್ನು ಹಾಗೂ 151 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅನಾಹುತ ತಡೆಯಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ಮಳೆಗಾಲದಲ್ಲಿ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಬಿಬಿಎಂಪಿ ಕೈಗೊಂಡಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲು ಅವರು ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರ ಅವರು, ‘ಮಳೆಗಾಲದಲ್ಲಿ ಕೆಲವೆಡೆ ರಸ್ತೆಗಳಲ್ಲೇ ನೀರು ನಿಲ್ಲುತ್ತಿದ್ದು, ಇಂತಹ ಕಡೆ ಚರಂಡಿ ನಿರ್ಮಿಸುವಂತೆ, ಚರಂಡಿಗಳಲ್ಲಿ ಸಿಲುಕಿರುವ ಕಸ ಕಡ್ಡಿಗಳನ್ನು ಸ್ವಚ್ಛಗೊಳಿಸುವಂತೆ ಹಾಗೂ ರಾಜಕಾಲುವೆಗಳ ಹೂಳನ್ನು ತೆರವುಗೊಳಿಸುವಂತೆ ಸೂಚಿಸಿದ್ದೇನೆ’ ಎಂದರು.
‘ಮಳೆಗಾಲದಲ್ಲಿ ಅಹವಾಲು ಸ್ವೀಕರಿಸಲು9 ಶಾಶ್ವತ ನಿಯಂತ್ರಣ ಕೊಠಡಿಗಳು ಸೇರಿದಂತೆ ಒಟ್ಟು 63 ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ವಹಣೆಗಾಗಿಯೇ ₹ 5 ಕೋಟಿ ಅನುದಾನ ಒದಗಿಸಲಾಗಿದೆ. ಸಮಸ್ಯೆ ಎದುರಾದರೆ ತುರ್ತು ಸ್ಪಂದನೆಗಾಗಿ ತಂಡಗಳು ಸಜ್ಜಾಗಿವೆ.ಒಣಗಿರುವ ಮರಗಳನ್ನು ಹಾಗೂ ಒಣ ಕೊಂಬೆಗಳನ್ನು ಕೂಡಲೆ ತೆರವುಗೊಳಿಸಬೇಕು. ಬಿದ್ದ ಮರಗಳನ್ನು ತೆರವು ಮಾಡಲು ವಿಶೇಷ ತಂಡಗಳನ್ನು ನಿಯೋಜಿಸುವಂತೆ ನಿರ್ದೇಶನ ನೀಡಿದ್ದೇನೆ’ ಎಂದರು.