ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಜಯ ನಗರ ಹೆಬ್ಬಾಗಿಲು ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಕನ್ನಡಪರ ಸಂಘಟನೆಗಳು ಇಲ್ಲಿ ಹೆಬ್ಬಾಗಿಲು ನಿರ್ಮಾಣ ಸಂಬಂಧಿಸಿದಂತೆ ಬಹಳ ಕಾಲದಿಂದ ಒತ್ತಾಯಿಸುತ್ತಿದ್ದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್ ಆರ್. ಸಂಪತ್ರಾಜ್, ‘ಮೈಸೂರು ಬ್ಯಾಂಕ್ ವೃತ್ತ ಕನ್ನಡ ಪರ ಹೋರಾಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ರಾಜ್ಯದ ಇತಿಹಾಸ, ಸಂಸ್ಕೃತಿ ಪರಂಪರೆ ಸಾರುವ ವಿಜಯನಗರದ ಹೆಬ್ಬಾಗಿಲನ್ನು ಬಿಬಿಎಂಪಿ ವತಿಯಿಂದ ಕಾಯಂ ಆಗಿ ನಿರ್ಮಿಸುತ್ತೇವೆ' ಎಂದರು.
‘ನಮ್ಮ ಬೆಂಗಳೂರಿನ ಅಂದವನ್ನು ಇನ್ನಷ್ಟು ಹೆಚ್ಚಿಸಲು ಕಾವೇರಿ ಭವನದ ಸಮೀಪ ಬೃಹದಾಕಾರದಲ್ಲಿ ವಿಜಯನಗರ ಹೆಬ್ಬಾಗಿಲು ನಿರ್ಮಾಣಗೊಳ್ಳುತ್ತಿದೆ. ಇನ್ನು ಆರು ತಿಂಗಳೊಳಗಾಗಿ ವಿಜಯನಗರ ಹೆಬ್ಬಾಗಿಲಿನ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಪರಮೇಶ್ವರ ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇದ್ದರು.