ಕೆಂಗೇರಿ: ‘ನಾನು ಈಗ ಕನ್ನಡ ನಾಡಿನಲ್ಲೇ ವಾಸವಾಗಿದ್ದು ಕನ್ನಡ ಅರ್ಥವಾಗುತ್ತದೆ. ಆದರೆ, ಸರಾಗವಾಗಿ ಮಾತನಾಡುವ ಸಾಮರ್ಥ್ಯವಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ’ ಎಂದು ಮಹಾತ್ಮ ಗಾಂಧಿ ಅವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಹೇಳಿದರು.
ಕೆಂಗೇರಿಯಲ್ಲಿ ಭಾನುವಾರ ನಡೆದ ಐರಾವತ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಬಾಗಿನ ಸ್ವೀಕರಿಸಿ ಅವರು ಮಾತನಾಡಿದರು.
‘ತವರು, ಗಂಡನ ಮನೆಯ ಶ್ರೇಯಸ್ಸಿನಲ್ಲಿ ಹೆಣ್ಣು ಮಕ್ಕಳ ಪಾತ್ರ ಗಮನಾರ್ಹ. ಈ ಗುಣವನ್ನು ಗೌರವಿಸಲು ಹಾಗೂ ಆಕೆಯ ಸೇವೆಗೆ ಋಣ ಸಂದಾಯದ ಸಂಕೇತವಾಗಿ ಬಾಗಿನ ಕೊಡುವ ಪ್ರತೀತಿ ಜನಪದರ ಕಾಲದಿಂದ ನಡೆದುಬಂದಿದೆ’ ಎಂದು ದೇಗುಲಮಠದ ಸ್ವಾಮೀಜಿ ಹೇಳಿದರು.
‘ಗಾಂಧೀಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ದೇಶದ ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗಾಂಧಿ ಹಾಗೂ ನೆಹರೂ ಅವರ ಚಿಂತನೆಗಳು ಅತ್ಯಂತ ಮಹತ್ವದ್ದು’ ಎಂದು ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.
ಚಂದ್ರಕುಮಾರಿ ಬಿ.ಆರ್.ಶೆಟ್ಟಿ, ಮೇಯರ್ ಗಂಗಾಂಬಿಕೆ, ಸತ್ಯಭಾಮಾ ಚಂದ್ರಶೇಖರ ಕಂಬಾರ ಹಾಗೂ ಡಾ.ಆರತಿ ಕೃಷ್ಣ ಅವರಿಗೂ ಇದೇ ಸಂದರ್ಭದಲ್ಲಿ ಬಾಗಿನ ನೀಡಿ ಗೌರವಿಸಲಾಯಿತು.