ಬೆಂಗಳೂರು: ಬೀದರ್ನಿಂದ ನಗರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 76 ಲಕ್ಷ ಮೌಲ್ಯದ 127 ಕೆ.ಜಿ ಗಾಂಜಾವನ್ನು ಜೆ.ಪಿ.ನಗರ ಪೊಲೀಸರು ಜಪ್ತಿ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಸರ್ಜಾಪುರ ಬಳಿಯ ಬಿಲ್ಲಾಪುರ ಗ್ರಾಮದ ಅಸ್ಗರ್ ಖಾನ್ (24), ತೆಲಂಗಾಣದ ಜಿ. ಕಿರಣ್ (22) ಹಾಗೂ ಪಿ. ಮಹಿಪಾಲ್ (22) ಬಂಧಿತರು. ಗಾಂಜಾ ಜೊತೆಯಲ್ಲಿ 2 ಮೊಬೈಲ್ ಹಾಗೂ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.
‘ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಗರ್, ಮಾದಕ ವ್ಯಸನಿ. ಆರೋಪಿ ಕಿರಣ್, ತನ್ನೂರಿನ ಐಟಿಐ ಕಾಲೇಜೊಂದರಲ್ಲಿ ಅತಿಥಿ ಶಿಕ್ಷಕ. ಮಹಿಪಾಲ್ ಬಿ.ಎ ಪದವೀಧರ.’
‘ಲಾಕ್ಡೌನ್ನಿಂದಾಗಿ ಮೂವರ ಕೆಲಸ ಹೋಗಿತ್ತು. ಕುಟುಂಬ ನಿರ್ವಹಣೆಯೂ ಕಷ್ಟವಾಗಿತ್ತು. ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ ಅವರು ಗಾಂಜಾ ಮಾರಾಟ ಮಾಡಲಾರಂಭಿಸಿದ್ದ. ಬೀದರ್ನಲ್ಲಿ ಖರೀದಿಸುತ್ತಿದ್ದ ಗಾಂಜಾವನ್ನು ಕಾರಿನಲ್ಲಿ ನಗರಕ್ಕೆ ತಂದು ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ಹೇಳಿದರು.
‘ಕಿರಣ್ ಹಾಗೂ ಮಹಿಪಾಲ್ ಇಬ್ಬರೂ ಸಂಬಂಧಿಕರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಅಸ್ಗರ್ ಖಾನ್ ಪರಿಚಯ ಆಗಿತ್ತು. ನಂತರ ಮೂವರು ಸೇರಿಕೊಂಡು ಬಾಡಿಗೆ ಕಾರು ಪಡೆದು ಬೀದರ್ಗೆ ಹೋಗಿ ಗಾಂಜಾ ತರುತ್ತಿದ್ದರು. ಮಾರ್ಗಮಧ್ಯೆ ಉಪ ಪೆಡ್ಲರ್ಗಳಿಗೆ ಗಾಂಜಾ ಮಾರುತ್ತಿದ್ದರು’ ಎಂದೂ ತಿಳಿಸಿದರು.