ಬೆಂಗಳೂರು: ನಾಯಂಡಹಳ್ಳಿ– ಕೆಎಸ್ಆರ್ ರೈಲು ನಿಲ್ದಾಣದ ನಡುವಿನ ಮಾರ್ಗದಲ್ಲಿ ಸರಕು ಸಾಗಣೆ ರೈಲು ಹಳಿ ತಪ್ಪಿ ಕೆಲ ಕಾಲ ರೈಲು ಸಂಚಾರಕ್ಕೆ ತೊಡಕಾಗಿತ್ತು.
ರೈಲಿನ ನಾಲ್ಕು ಚಕ್ರಗಳು ಮಧ್ಯಾಹ್ನ 3.10ರ ವೇಳೆಗೆ ಹಳಿ ತಪ್ಪಿದ್ದವು. ಕೂಡಲೇ ಸರಿಪಡಿಸುವ ಕಾರ್ಯವನ್ನು ರೈಲು ಸಿಬ್ಬಂದಿ ಆರಂಭಿಸಿದರು. ಸಂಜೆ 5.34ರ ವೇಳೆಗೆ ಸರಿಪಡಿಸಲಾಯಿತು.
ರೈಲ್ವೆ ಮಾರ್ಗಕ್ಕಾಗಲಿ, ರೈಲಿನಲ್ಲಿ ಇದ್ದ ಸಿಬ್ಬಂದಿಗಾಗಲಿ ಯಾವುದೇ ತೊಂದರೆ ಆಗಿಲ್ಲ. ರೈಲು ಹಳಿ ತಪ್ಪಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ.