ಬೆಂಗಳೂರು: ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಕಮಲಾಕರ್ ಮಡಿವಾಳ (29) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವೇಶ್ವರನಗರ 4ನೇ ಹಂತದ ನಿವಾಸಿ ಕಮಲಾಕರ್, ಪತ್ನಿ ಹಾಗೂ ಮೂರು ವರ್ಷದ ಮಗು ಜೊತೆ ವಾಸವಿದ್ದರು.
‘ಪರವಾನಗಿ ಪಿಸ್ತೂಲ್ ಪಡೆದಿದ್ದ ಕಮಲಾಕರ್, ಖಾಸಗಿ ಗನ್ಮ್ಯಾನ್ ಆಗಿದ್ದರು. ಗಣ್ಯರು, ಉದ್ಯಮಿಗಳು ಹಾಗೂ ಇತರರ ಬಳಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲೇ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪತ್ನಿ ಹಾಗೂ ಸಂಬಂಧಿಕರಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.