ಸ್ಥಳೀಯಸಂಘ–ಸಂಸ್ಥೆಗಳ ಸಹಕಾರದಲ್ಲಿ ಹಲಸೂರು ಲೇಕ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಷಿಯೇಷನ್ ಆಯೋಜಿಸಿದ್ದ ಕೆರೆ ಸ್ವಚ್ಛತಾ ಅಭಿಯಾನವು ಜಲಮೂಲಕ್ಕೆ ಹೊಸ ರೂಪ ನೀಡಿತು. 1,300ಕ್ಕೂ ಹೆಚ್ಚು ಮಂದಿ ಈ ಕಾರ್ಯದಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದರು.
‘ನಾಲ್ಕು ಲಾರಿ ಲೋಡ್ಗಳಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಮೇಲೆತ್ತಲಾಯಿತು. ಗಣಪತಿ ಮೂರ್ತಿಯ ಪಳೆಯುಳಿಕೆಗಳು ಕೂಡ ಕೆರೆಯಲ್ಲಿ ದೊರೆತವು’ ಎಂದು ಕೆರೆಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಿರುವ ಟೆಕಿ ಆನಂದ ಮಲ್ಲಿಗವಾಡ ತಿಳಿಸಿದರು.
‘ಸ್ವಯಂಸೇವಕರಿಗೆ ಕೆರೆ ಸಂರಕ್ಷಣೆಯ ಮಹತ್ವವನ್ನು ಮೊದಲಿಗೆ ವಿವರಿಸಿದೆವು. ಸದ್ಯ ಎರಡು ವಾರಕ್ಕೊಮ್ಮೆ ಹಲಸೂರು ಕೆರೆ ಸ್ವಚ್ಛತಾ ಅಭಿಯಾನ ನಡೆಸಲಾಗುವುದು. ಜುಲೈ 15ರ ನಂತರ ಪ್ರತಿ ವಾರವೂ ಅಭಿಯಾನ ನಡೆಯಲಿದೆ’ ಎಂದರು.
‘ಕೆರೆ ನಿರ್ಮಾಣವಾದಾಗಅದರ ನೀರನ್ನು ಜನ ಕುಡಿಯಲು ಬಳಸುತ್ತಿದ್ದರು. ಇದನ್ನು ಮತ್ತೆ ಅದೇ ಸ್ವರೂಪಕ್ಕೆ ತರಬೇಕಿದೆ. ಜಲಮೂಲಕ್ಕೆ ಕಲುಷಿತ ನೀರು ಸೇರುವುದನ್ನು ತಡೆಯಲು ಬೇಕಿರುವ ಯೋಜನೆಯನ್ನು ರೂಪಿಸಿಕೊಂಡಿದ್ದೇನೆ. 2020ರ ವೇಳೆಗೆ ಕೆರೆ ಸುಂದರ ಮತ್ತು ಸ್ವಚ್ಛವಾಗಲಿದೆ’ ಎಂದರು.
‘ಸ್ವಯಂಸೇವಕರಿಗೆ ತರಬೇತಿ ನೀಡಿ ಅವರದೇ ನೇತೃತ್ವದಲ್ಲಿ ಅಲ್ಲಲ್ಲಿ ತಂಡಗಳನ್ನು ರಚನೆ ಮಾಡುತ್ತೇವೆ. ಸ್ಥಳೀಯರನ್ನು ಸೇರಿಸಿಕೊಂಡು ನಗರದ ಎಲ್ಲಾ ಕೆರೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.