ಬೆಂಗಳೂರು: ‘ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸದೇ ಕೆರೆಗಳನ್ನು ನುಂಗಲು ಆಸ್ಥೆ ವಹಿಸಿದ್ದೇ ಇಂದಿನ ಸಮಸ್ಯೆಗಳಿಗೆ ಕಾರಣ’ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಳೆಹಾನಿಗೆ ತುತ್ತಾಗಿರುವ ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೆಲವೆಡೆ, ಹೆಚ್ಚು ಹಾನಿಯಾಗಿರುವ ಹೊರಮಾವು ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
‘ಕೆರೆ ನುಂಗಿರುವುದು ದೊಡ್ಡ ತಪ್ಪು. ರಾಜಕಾಲುವೆ ನಿರ್ವಹಣೆ ಸರಿಯಾಗಿ ಆಗಿಲ್ಲ. ಒಳಚರಂಡಿ ಸ್ಥಳಗಳನ್ನು ಒತ್ತುವರಿ ಮಾಡಲಾಗಿದೆ. ತ್ಯಾಜ್ಯ ಸುರಿದು ಕೆರೆ ಮುಚ್ಚಿಸುತ್ತಿದ್ದಾರೆ. ಇದು ಸಮಸ್ಯೆಗಳಿಗೆ ಕಾರಣ ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕಂಡುಬರುವ ಚಿತ್ರಣವೇ ಬೇರೆ, ಒಳ ಹೊಕ್ಕು ನೋಡಿ ಚಿತ್ರಣವೇ ಬೇರೆ ಇದೆ.ಅಲಕ್ಷ್ಯಕ್ಕೀಡಾಗಿರುವ ಕಡೆ ಮೂಲಸೌಕರ್ಯಗಳ ಸಮಸ್ಯೆ ಇದೆ. ಮಳೆ ಬಂದಾಗ ಪರಿಹಾರ ಕೊಡುವುದು ಬಿಟ್ಟರೆ ಶಾಶ್ವತ ಪರಿಹಾರ ಆಗಿಲ್ಲ’ ಎಂದು ಹೇಳಿದರು.
‘ನನ್ನ ಅವಧಿಯಲ್ಲಿ ಹೊರ ವಲಯದ ಪೆರಿಪೆರಲ್ ರಿಂಗ್ ರಸ್ತೆಗೆ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದೆ. ಇದುವರೆಗೂ ಒಂದೇ ಒಂದು ಕಿ.ಮೀ ರಸ್ತೆ ಅಭಿವೃದ್ಧಿಯು ಮುಂದಕ್ಕೆ ಹೋಗಿಲ್ಲ. ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮಾದರಿ ನಗರವನ್ನಾಗಿ ಮಾಡುತ್ತೇವೆ’ ಎಂದು ಅವರು ತಿಳಿಸಿದರು.