ಹೆಸರಘಟ್ಟ: ‘ಗ್ರಾಮ ಪಂಚಾಯಿತಿ ಕಚೇರಿಗೆ ಐದಾರು ವರ್ಷಗಳಿಂದ ಅಲೆದಾಡುತ್ತಿದ್ದರೂ ಕುಡಿಯುವ ನೀರಿನ ಸಂಪರ್ಕವನ್ನು ನೀಡಿಲ್ಲ’ ಎಂದು ಮಾಜಿ ಸೈನಿಕ ಎಸ್.ಎಂ.ಕೃಷ್ಣಪ್ಪ ಶಿವಕೋಟೆ ಗ್ರಾಮಪಂಚಾಯಿತಿ ಗ್ರಾಮಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಜಮ್ಮು ಮತ್ತು ಕಾಶ್ಮೀರದಲ್ಲಿ ಇಪ್ಪತ್ತು ವರ್ಷ ಕೆಲಸ ನಿರ್ವಹಿಸಿ ಸ್ವಯಂ ನಿವೃತ್ತಿಯನ್ನು ಪಡೆದಿದ್ದೀನಿ. ನನ್ನ ಹುಟ್ಟೂರು ಶಿವಕೋಟೆ. ಎಲ್ಲ ದಾಖಲೆಗಳು ನನ್ನ ತಾಯಿಯ ಹೆಸರಿನಲ್ಲಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಕುಡಿಯುವ ನೀರಿನ ಸೌಲಭ್ಯವನ್ನು ಮಾಡಿಕೊಟ್ಟಿಲ್ಲ’ ಎಂದು ಅವರು ದೂರಿದರು.
‘ಪಂಚಾಯಿತಿ ಅಭಿವೃದ್ದಿ ಅಧಿಕಾರಿ ದಿನಕ್ಕೊಂದು ದಾಖಲೆಗಳನ್ನು ಕೇಳುತ್ತಾರೆ. ಕುಂಟು ನೆಪಗಳನ್ನು ಹೇಳುತ್ತಾರೆ. ನಾವು ಪಂಚಾಯಿತಿಗೆ ಕಂದಾಯ ಕಟ್ಟಿದರೂ ನೀರಿನ ಸಂಪರ್ಕ ಕೊಟ್ಟಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸೊಣೇನಹಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್, ‘ದೇಶಕ್ಕಾಗಿ ದುಡಿದು ಬಂದವರಿಗೆ ಪ್ರಾಥಮಿಕ ಸೌಲಭ್ಯ ನೀಡದಿದ್ದರೆ ಹೇಗೆ? ಕೂಡಲೇ ನೀರಿನ ಸಂಪರ್ಕ ನೀಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.