ಹೆಸರಘಟ್ಟ: ‘ಯಲಹಂಕ ತಾಲ್ಲೂಕಿನಲ್ಲಿ ಹತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಶೇಕಡ 3ರಷ್ಟು ಮನೆಗಳನ್ನು ಅಂಗವಿಕಲರಿಗೆ ಮೀಸಲಿಡಲಾಗುವುದು’ ಎಂದು ಯಲಹಂಕ ಶಾಸಕ ಮತ್ತು ಬಿ.ಡಿ.ಎ.ಅಧ್ಯಕ್ಷರಾದ ಎಸ್.ಅರ್.ವಿಶ್ವನಾಥ್ ತಿಳಿಸಿದರು.
‘ವಾಯ್ಸ್ ಆಫ್ ನೀಡಿ’ ಫೌಂಡೇಷನ್ ತರಬೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವೀಲ್ ಚೇರ್ ವಿತರಿಸಿ ಮಾತನಾಡಿದರು.
‘ಅಂಗವೈಕಲ್ಯ ಎನ್ನುವುದು ಶಾಪವಲ್ಲ. ಪೂರ್ವಜನ್ಮದ ಕರ್ಮವೂ ಅಲ್ಲ. ಅಂಗವೈಕಲ್ಯದ ನಡುವೆಯೂ ಸಾಕಷ್ಟು ಜನ ಅನುಪಮ ಸಾಧನೆಯನ್ನು ಮಾಡಿದ್ದಾರೆ’ ಎಂದರು.
ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಬಿ.ಕೃಷ್ಣಯ್ಯ, ‘ಅಂಗವಿಕಲರಿಗಾಗಿ ಅಂಕವಿಕಲರೇ ನಿಂತು ಮಾಡುತ್ತಿರುವ ಕೆಲಸ ಶ್ಲಾಘನೀಯ. ಸರ್ಕಾರದ ಯೋಜನೆಗಳ ಬಗ್ಗೆ ಅಂಗವಿಕಲರು ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು' ಎಂದು ಹೇಳಿದರು.
ಅಂಗವಿಕಲರಿಗೆ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಂಗಳೂರು ನಗರ ಉಪಾಧ್ಯಕ್ಷ ವೀಣಾ ರಮೇಶ್, ಬಿಜೆಪಿ ಮುಖಂಡರಾದ ಮನೋಹರ್, ದೇವರಾಜ್ ಉಪಸ್ಥಿತರಿದ್ದರು.