ಬೆಂಗಳೂರು: ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದ ರಿಟ್ ಅರ್ಜಿಯಲ್ಲಿ ಕಚೇರಿ ಆಕ್ಷೇಪಣೆ ಪೂರೈಸಲು ವಿಳಂಬ ತೋರಿದ್ದ ಅರ್ಜಿದಾರರೊಬ್ಬರಿಗೆ ಹೈಕೋರ್ಟ್, ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರ ‘ವಕೀಲರೊಬ್ಬರ ವಗೈರೆಗಳು‘ ಪುಸ್ತಕವನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ನೀಡುವಂತೆ ದಂಡ ರೂಪದ ಆದೇಶ ಹೊರಡಿಸಿದೆ.
ತುಮಕೂರಿನ ಭಾಗ್ಯ ನಗರದ ಮಹಾಲಕ್ಷ್ಮಮ್ಮ ಮತ್ತು ಜಿ.ಮಂಗಳಾ ಎಂಬುವರು ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ (ಡಬ್ಲ್ಯೂ.ಪಿ.11624/2022) ದಾಖಲಿಸಿದ್ದರು. ಅರ್ಜಿಯ ಕಚೇರಿ ಆಕ್ಷೇಪಣೆ ವಿಳಂಬವಾದ ಕಾರಣ ಅದು ಮಾನ್ಯತೆ ಕಳೆದುಕೊಂಡಿತ್ತು.
ರಿಟ್ ಅರ್ಜಿಯನ್ನು ಪುನರ್ಸ್ಥಾಪಿಸಲು ಕೋರಲಾದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ. ‘ಅರ್ಜಿ ಪುರಸ್ಕರಿಸಲಾಗುತ್ತಿದೆ. ಆದರೆ, ನಿಮ್ಮ ನಿರ್ಲಕ್ಷ್ಯಕ್ಕೆ ದಂಡ ರೂಪದಲ್ಲಿ, ಕ್ರಿಮಿನಲ್ ವಕೀಲ ಸಿ.ಎಚ್.ಹನುಮಂತರಾಯ ಅವರು ಬರೆದಿರುವ ವಕೀಲರೊಬ್ಬರ ವಗೈರೆಗಳು ಪುಸ್ತಕವನ್ನು ಅಕಾಡೆಮಿಗೆ ನೀಡಿ ಮತ್ತು ಒಂದು ವಾರದೊಳಗೆ ಕಚೇರಿ ಆಕ್ಷೇಪಣೆ ಪ್ರಕ್ರಿಯೆಯನ್ನು ಪೂರೈಸಿ‘ ಎಂದು ಆದೇಶಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.