ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ನೊಂದವರ ಜತೆಗಿರುವೆ: ಆರ್. ಅಶೋಕ

ಅನಾಥರಾದ ಮಕ್ಕಳ ಶಿಕ್ಷಣದ ಹೊಣೆ; ₹1 ಲಕ್ಷ ಪರಿಹಾರ ವಿತರಣೆ
Last Updated 14 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಹಲವರಿಗೆ ಚೇತರಿಸಿಕೊಳ್ಳಲಾಗದಷ್ಟು ಆಘಾತ ನೀಡಿದೆ. ಕ್ಷೇತ್ರದ ಯಾರೂ ಅನಾಥರಲ್ಲ, ಎಲ್ಲ ಕುಟುಂಬಗಳ ಜೊತೆ ಇರುತ್ತೇನೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 1,600ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಿ ಮಾತನಾಡಿದ ಅವರು, ‘ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಕೋವಿಡ್ ವಿರುದ್ಧ ಗೆಲುವು ಸಾಧಿಸಲು ಎಲ್ಲರೂ ಲಸಿಕೆ ಪಡೆಯಲೇಬೇಕು. ವಿರೋಧ ಪಕ್ಷಗಳ ಅಪಪ್ರಚಾರದಿಂದ ಲಸಿಕಾ ಕಾರ್ಯಕ್ರಮಕ್ಕೆ ಹಿನ್ನಡೆಯಾಯಿತು’ ಎಂದರು.

‘ಕೋವಿಡ್‌ನಿಂದ ನೊಂದವರ ಜೊತೆ ನಿಲ್ಲಲು ನಿರ್ಧರಿಸಿದ್ದೇನೆ. ಪದ್ಮನಾಭನಗರ ಕ್ಷೇತ್ರದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಾನೇ ಹೊರುತ್ತೇನೆ. ದುಡಿಯುವ ವ್ಯಕ್ತಿಗಳನ್ನ ಕಳೆದುಕೊಂಡ ಮೂರು ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹1 ಲಕ್ಷ ನೆರವು ನೀಡುತ್ತಿದ್ದೇನೆ’ ಎಂದು ಹೇಳಿದರು.‌

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ನೊಂದವರ ಮನದ ಕೂಗು ಕಾಳಜಿಯುತ ಹೃದಯ ಉಳ್ಳವರಿಗೆ ಮಾತ್ರ ಕೇಳಿಸುತ್ತದೆ. ಅಂಥವರು ಮಾತ್ರ ಈ ರೀತಿಯ ಕಾರ್ಯ ಮಾಡಲು ಸಾಧ್ಯ’ ಎಂದರು.

ಆರೋಗ್ಯ ಸಚಿವ ಕೆ. ಸುಧಾಕರ ಮಾತನಾಡಿ, ’ಸೋಂಕಿನಿಂದ ಮೃತಪಟ್ಟ ನೂರಾರು ಜನರ ಅಸ್ಥಿಗಳ ವಿಸರ್ಜನೆಯನ್ನು ಅಶೋಕ ಮಾಡಿದರು. ಈ ರೀತಿಯ ಕಾರ್ಯ ಮಾಡಿದ್ದು ವಿಶ್ವದಲ್ಲೇ ಮೊದಲು’ ಎಂದು ಬಣ್ಣಿಸಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ‘ಕ್ಷೇತ್ರದಲ್ಲಿ ಯಾರೂ ಕೂಡಾ ಹಸಿವೆಯಿಂದ ಇರಬಾರದು ಎಂಬ ಅಶೋಕ ಅವರ ಕಾಳಜಿ ಈ ಕಾರ್ಯದಲ್ಲಿ ಕಾಣುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT