ಬೆಂಗಳೂರು: 2009ರ ಸುಪ್ರೀಂ ಕೋರ್ಟ್ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ವಿವರವಾದ ಅನುಸರಣಾ ವರದಿಯನ್ನು ದಾಖಲೆ ಸಹಿತ ಪಾಲಿಕೆಗೆ ಸಲ್ಲಿಸಬೇಕು’ ಎಂದು ಹೇಳಿತು.
‘2009ರ ಸೆಪ್ಟೆಂಬರ್ 29ರ ನಂತರ 106 ಧಾರ್ಮಿಕ ಕಟ್ಟಡಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂಬುದನ್ನು ನ್ಯಾಯಾಲಯ ನಂಬಬೇಕು ಎಂದು ಬಿಬಿಎಂಪಿ ಹೇಳುತ್ತಿದೆ. ಈ ಸಂಬಂಧ ಆಯುಕ್ತರಿಗೆ ನೋಟಿಸ್ ನೀಡಲಾಗಿದ್ದರೂ, ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.