ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | 110 ಹಳ್ಳಿಗಳಿಗೆ ಶೀಘ್ರ ಕಾವೇರಿ ನೀರು ಪೂರೈಕೆ: ಜಲಮಂಡಳಿ

ಕಾವೇರಿ 5ನೇ ಹಂತದ ಕಾಮಗಾರಿ ಪರಿಶೀಲಿಸಿದ ರಾಮ್‌ಪ್ರಸಾತ್‌ ಮನೋಹರ್‌
Published 15 ಮೇ 2024, 15:50 IST
Last Updated 15 ಮೇ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವೇರಿ 5ನೇ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಜಲಮಂಡಳಿ ನೀರು ಸರಬರಾಜಿಗೆ ಸಿದ್ದತೆ ನಡೆಸಿದೆ. ಶೀಘ್ರದಲ್ಲೇ 110 ಗ್ರಾಮಗಳಿಗೆ ಕಾವೇರಿ ನೀರಿನ ‌ಸಂಪರ್ಕ ಕಲ್ಪಿಸಲಿದೆ‘ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಹಾರೋಹಳ್ಳಿ ಬಳಿ ನಡೆಯುತ್ತಿರುವ ಕಾವೇರಿ-5ನೇ ಹಂತದ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.

ಕೆಲವೇ ವಾರಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಅದಕ್ಕೂ ಮುನ್ನ ಸಮರ್ಪಕವಾಗಿ ನೀರು ಪೂರೈಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಹಾಗೆಯೇ ಹೊಸ ಸಂಪರ್ಕ ಕಲ್ಪಿಸಲು ನೋಂದಣಿ ಪ್ರಕ್ರಿಯೆಯನ್ನೂ ನಡೆಸಬೇಕಾಗಿದೆ‘ ಎಂದು ರಾಮ್‌ಪ್ರಸಾತ್‌ ತಿಳಿಸಿದರು.

‘ಈ ಯೋಜನೆಯಿಂದ ನಗರಕ್ಕೆ 750 ಎಂಎಲ್‌ಡಿಯಷ್ಟು ಹೆಚ್ಚಿನ ನೀರು ಲಭ್ಯವಾಗಲಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲೂ ಜನರು ನೀರಿನ ಸಂಪರ್ಕ ಪಡೆಯುವಂತೆ ಅಧಿಕಾರಿಗಳು ಪ್ರೋತ್ಸಾಹಿಸಬೇಕು‘ ಎಂದು ಅವರು ಸೂಚಿಸಿದರು. 

110 ಗ್ರಾಮಗಳಲ್ಲಿ ಕೆಲವೆಡೆ ಅನಧಿಕೃತವಾಗಿ ಸಂಪರ್ಕಗಳನ್ನು ನೀಡಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಿ ಜಲಮಂಡಳಿಗೆ ಆದಾಯ ಬರುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

‘ಹೊಸ ಸಂಪರ್ಕಗಳ ನೋಂದಣಿ ಸಮರ್ಪಕವಾಗಿ ಆದರೆ, ನೀರಿನ ಸದ್ಬಳಕೆಯೂ ಆಗುತ್ತದೆ, ಜಲಮಂಡಳಿಗೆ ಆದಾಯ ದೊರೆಯಲಿದೆ. ಇದು ಸಾಲ ಮರುಪಾವತಿಗೆ ಸಹಾಯವಾಗಲಿದೆ. ಹಾಗಾಗಿ ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ನೀರಿನ ಸಂಪರ್ಕ ಪಡೆಯುವಂತೆ ಜನರ ಮನವೊಲಿಸಬೇಕು‘ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT