ಬೆಂಗಳೂರು: ‘ವಿಧವೆಯರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಉತ್ತಮಪಡಿಸುವ ವಾತಾವರಣ ನಿರ್ಮಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಅನೂರಾಧಾ ಹೇಳಿದರು.
ಪರಿಹಾರ್ ಫೌಂಡೇಷನ್ ವತಿಯಿಂದ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಧವೆಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಜುಲೈ 2ರಂದು ನಡೆಯಲಿರುವ ಬಜೆಜ್ ಅಧಿವೇಶನದಲ್ಲಿ ವಿಧವೆ, ವಿಚ್ಛೇದಿತರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಹೆಚ್ಚು ಸೌಲಭ್ಯ ನೀಡುವಂತೆ ಒತ್ತಾಯಿಸುವೆ’ ಎಂದರು.
ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ‘ಆರ್ಥಿಕ, ಸಾಮಾಜಿಕ, ಆರೋಗ್ಯ ಸೌಲಭ್ಯ ಮತ್ತು ತಿಂಗಳಿಗಾಗುವಷ್ಟು ಪಡಿತರ ವ್ಯವಸ್ಥೆ ಸೇರಿದಂತೆ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಹಲವು ಕಾರ್ಯಕ್ರಮಗಳನ್ನು ಸಂಸ್ಥೆ ಜಾರಿಗೆ ತಂದಿರುವುದು ಶ್ಲಾಘನೀಯ’ ಎಂದು ಹೇಳಿದರು.
ಕಿರುತೆರೆ ನಟಿ ಭಾರ್ಗವಿ ನಾರಾಯಣ್ ಮಾತನಾಡಿ, ‘ವಿಧವೆಯರನ್ನು ಸಮಾಜದ ಮುಖ್ಯವಾಹಿ ನಿಗೆ ತರುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ ಹೊಣೆ’ ಎಂದರು.
ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಬಿ.ಜಯಪ್ರಕಾಶ್ ಮಾತನಾಡಿ, ‘ ವಿಧವೆಯರಿಗೆ ಸಂಸ್ಥೆಯು ಆರೋಗ್ಯ ಸಿರಿ, ಸ್ಪಂದನ, ಮಿಲನ, ಮಿಥರಾ ಮತ್ತು ಸ್ವಾತನ್ಯ ಎಂಬ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ವಿವರಿಸಿದರು.
ವಿಧವೆಯರು ನೆರವಿಗಾಗಿ ದೂ.080-41482727 ಅನ್ನು ಸಂಪರ್ಕಿಸಬಹುದು ಎಂದರು.