ಬೆಂಗಳೂರು: ಸೂರ್ಯ ರಶ್ಮಿ ನೆಲ ಮುಟ್ಟುವ ಮುನ್ನವೇ ಸಿಲಿಕಾನ್ ಸಿಟಿಯ ಹಲವೆಡೆ ಉತ್ತಮ ಆರೋಗ್ಯ ಕ್ಕಾಗಿ ಜನರು ಬುಧವಾರ ಯೋಗಾಭ್ಯಾಸ ಮಾಡಿದರು. ವಿವಿಧ ಆಸನಗಳನ್ನು ಮಾಡುವ ಮೂಲಕ ಸಂಭ್ರಮಿಸಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಸಂಘ–ಸಂಸ್ಥೆಗಳು, ಯೋಗ ತರಬೇತಿ ಕೇಂದ್ರಗಳು, ಶಾಲಾ–ಕಾಲೇಜಿಗಳು ಸಾಮೂಹಿಕ ಯೋಗಾಸನ ಹಮ್ಮಿಕೊಂಡಿ ದ್ದವು. ಮುಂಜಾನೆಯೇ ಜನರು ಯೋಗ ಮ್ಯಾಟ್ ಹಿಡಿದು ಮೈದಾನ, ಉದ್ಯಾನ ಗಳಿಗೆ ತೆರಳಿ, ವಿವಿಧ ಆಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡಿದರು. ಯೋಗಪಟುಗಳು ಸೂಕ್ತ ಮಾರ್ಗದರ್ಶನ ನೀಡಿದರು.
ಆಯುಷ್ ಇಲಾಖೆ ವಿಧಾನಸೌಧದ ಮುಂಭಾಗ ಸಾಮೂಹಿಕ ಯೋಗಾಸನ ಹಮ್ಮಿಕೊಂಡಿತ್ತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಉದ್ಘಾಟಿಸಿದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ವಾಸಗುರು ವಚನಾನಂದ ಸ್ವಾಮೀಜಿ, ಕ್ರೀಡಾಪಟು ಅಂಜು ಬಾಬಿ ಜಾರ್ಜ್, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಶಾಸಕ ರಿಜ್ವಾನ್ ಅರ್ಷದ್ ಸೇರಿ ಹಲವರು ಯೋಗಾಸನ ಮಾಡಿದರು.
ಸರ್ಕಾರದಿಂದ ಪೂರ್ಣ ಪ್ರೋತ್ಸಾಹ: ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ವಿಶ್ವಕ್ಕೆ ಯೋಗದ ಕೊಡುಗೆ ನಮ್ಮ ಹೆಮ್ಮೆ. ಯೋಗಾ ಭ್ಯಾಸದಿಂದ ಮನಸ್ಸು ಮತ್ತು ದೇಹ ಹತೋಟಿಯಲ್ಲಿರುತ್ತದೆ. ಆದ್ದ ರಿಂದ ರಾಜ್ಯ ಸರ್ಕಾರವು ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ’ ಎಂದು ಭರವಸೆ ನೀಡಿದರು.
ರಾಷ್ಟ್ರೋತ್ಥಾನ ಪರಿಷತ್ ವತಿ ಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಯೋಗ ದಿನ ಆಚರಿಸಲಾಯಿತು. ಬೆಂಗಳೂರು ವಿ.ವಿ ಯೋಗ ಕೇಂದ್ರದಿಂದ ಜ್ಞಾನಭಾರತಿ ಆವರಣದಲ್ಲಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಚಾಮರಾಜಪೇಟೆಯ ಕ್ಯಾಂಪಸ್ನಲ್ಲಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋ ಧನಾ ಸಂಸ್ಥೆಯಲ್ಲಿ ಯೋಗಾಸನ ನಡೆಯಿತು. ಭಾರತೀಯ ವಾಯು ಪಡೆಯ ಯೋಧರು ಬೆಂಗಳೂರು ಕೋಟೆಯಲ್ಲಿ ಯೋಗಾಸನ ಮಾಡಿದರು.
ಪಿಇಎಸ್ ವಿ.ವಿ ತನ್ನ ಕ್ಯಾಂಪಸ್ನಲ್ಲಿ ಯೋಗ ದಿನ ಆಚರಿಸಿತು. ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ, ‘6ನೇ ತರಗತಿ ಯಿಂದ ಸ್ನಾತಕೋತ್ತರ ಪದವಿಯವರೆಗೆ ಯೋಗವನ್ನು ಕಡ್ಡಾಯಗೊಳಿಸಿ, ಪಠ್ಯಕ್ರಮದ ಭಾಗವಾಗಿಸಬೇಕು’ ಎಂದು ಆಗ್ರಹಿಸಿದರು.
ಸಿ.ಎಂ.ಆರ್ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಮಹಾವತಾರ್ ಫೌಂಡೇಷನ್ ಸಹಯೋಗದಲ್ಲಿ ಯೋಗ ದಿನ ಆಚರಿಸಿತು. ಯೋಗ ಗುರು ಸಂತ ಸದಾನಂದ ಗಿರಿ ಮಹಾರಾಜ್ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
‘ಯೋಗ ರತ್ನ’ ಪ್ರಶಸ್ತಿ
ಶ್ವಾಸ ಯೋಗ ಸಂಸ್ಥೆ ನಗರದಲ್ಲಿ ಹಮ್ಮಿಕೊಂಡ ಯೋಗ ದಿನಾ ಚರಣೆಯಲ್ಲಿ ಸಾಧಕರಿಗೆ ‘ಯೋಗ ರತ್ನ-2023’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಹೃಷಿಕೇಶದ ಸ್ವಾಮಿ ರಾಮಸಾಧಕ ಗ್ರಾಮ ಆಶ್ರಮದ ಅಹಿಂಸಿನ್ ಸಂಸ್ಥೆ, ಇಂಡೋನೇಷಿಯಾದ ಗಾಂಧಿ ಆಶ್ರಮ, ಬಾಲಿಯ ಅಗಸ್ ಇಂದ್ರ ಉದಯನ್, ಚೀನಾದ ಬೀಜಿಂಗ್ನ ಯೋಗಿಯೋಗ ಸಂಸ್ಥೆಯ ಮನಮೋಹನ ಸಿಂಗ್ ಭಂಡಾರಿ, ಅರ್ಜೆಂಟೀನಾದ ಶ್ವಾಸಯೋಗಿ ವಿಕ್ಟರ್ ಟ್ರುವಿಯಾನೋ ಹಾಗೂ ಗುಳೇದಗುಡ್ಡದ ಕೃಷ್ಣ ಯೋಗಾಶ್ರಮದ ಗುರೂಜಿ ಬಸವ ರಾಜ ಹಡಗಲಿ ಅವರಿಗೆ ‘ಯೋಗ ರತ್ನ’ ಪ್ರಶಸ್ತಿ ಯನ್ನು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ದಿನೇಶ್ ಗುಂಡೂರಾವ್ ಪ್ರದಾನ ಮಾಡಿದರು.
ನಾನು ಸ್ವತಃ ಯೋಗ ಪಟುವಾಗಿದ್ದು, ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಿದ್ದೇನೆ.–ಥಾವರಚಂದ್ ಗೆಹಲೋತ್, ರಾಜ್ಯಪಾಲ
ವಿವಿಧ ರೀತಿಯ ಯೋಗಗಳು ವಿವಿಧ ಹೆಸರಿನಲ್ಲಿ ಚಾಲ್ತಿಯಲ್ಲಿವೆ. ಸರ್ಕಾರ ಈ ಬಗ್ಗೆ ಗಮನಹರಿಸಿ, ಮಾನ್ಯತೆ ಹೊಂದಿದ ಪಠ್ಯಪುಸ್ತಕದ ರೂಪ ನೀಡಬೇಕು.–ಯು.ಟಿ. ಖಾದರ್, ವಿಧಾನಸಭಾಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.