ರಿಪ್ಪನ್ಪೇಟೆ: ಹೊಂಬುಜ ಪೀಠದಲ್ಲಿ ಸ್ಥಳಾವಕಾಶ ಕಲ್ಪಿಸಿದರೆ ಹಂಪಿ ವಿಶ್ವವಿದ್ಯಾಲಯದಿಂದ ಜೈನ ಅಧ್ಯಯನ ಕೇಂದ್ರ ಆರಂಭಿಸುವುದಾಗಿ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸ.ಜಿ. ರಮೇಶ್ ಭರವಸೆ ನೀಡಿದರು.
ಸಮೀಪದ ಹೊಂಬುಜ ಜೈನಮಠದಲ್ಲಿ ಭಾನುವಾರ ಏರ್ಪಡಿಸಿದ್ದ 50 ವಿಭಿನ್ನ ಅಮೂಲ್ಯ ಗ್ರಂಥಗಳ ಮೆರವಣಿಗೆ, ಶೃತಪೂಜೆ ಹಾಗೂ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಉತ್ತಮ ಸಂಸ್ಕಾರ ನೀಡುವಂತಹ ಗ್ರಂಥಗಳ ಪ್ರಕಟಣೆಗೆ ಸರ್ಕಾರ ವಿಶ್ವವಿದ್ಯಾಲಯ ಹಾಗೂ ಪ್ರಕಾಶನ ಸಂಸ್ಥೆಗಳು ಮುಂದಾಗಬೇಕು ಎಂದು ಹೇಳಿದರು.
ಲೇಖಕರನ್ನು ಹಾಗೂ ಇತಿಹಾಸಕಾರರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಹೊಂಬುಜ ಮಠ ಪರಂಪರೆಯು ಸಾಹಿತ್ಯಕ್ಕೆ ವಿಶೇಷ ಸ್ಥಾನ–ಮಾನ ಕಲ್ಪಿಸಿದೆ. ಬಾಹ್ಯ ಸಂತೋಷ ತೊರೆದು ಅರಿಷಡ್ವರ್ಗ ನಿಯಂತ್ರಿಸಿಕೊಂಡು ಶ್ರೇಷ್ಠ ಸಂಸ್ಕೃತಿ, ಸಂಸ್ಕಾರದಿಂದ ಅಂತರಂಗದ ಜ್ಞಾನ ಸಂಪಾದನೆಯನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಮೀಸಲಿಟ್ಟ ಜೈನ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದರು.
ಡಾ. ಹಂ.ಪ. ನಾಗರಾಜಯ್ಯ, ‘ಜಗತ್ತಿನಲ್ಲಿ ಮೇಳೈಸುತ್ತಿರುವ ಹಿಂಸೆ, ಅರಾಜಕತೆಗೆ ಕಡಿವಾಣ ಹಾಕಿ, ಸರ್ವಧರ್ಮ ಸಮನ್ವಯತೆ ಮಾನದಂಡವೇ ಅಹಿಂಸೆ ಎಂಬ ದಿವ್ಯ ಮಂತ್ರದ ಸಂಜೀವಿನಿಯನ್ನು ಜಗತ್ತಿಗೆ ಪರಿಚಯಿಸುವ ಕಾಲ ಜೈನ ಧರ್ಮದ ಮೂಲಕ ಸನ್ನಿಹಿತವಾಗಿದೆ’ ಎಂದರು.
108 ವರ್ಧಮಾನ ಸಾಗರ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.