ಬೆಂಗಳೂರು: ‘ಜಯಪ್ರಕಾಶ್ ನಾರಾಯಣ್ (ಜೆ.ಪಿ) ಚಳವಳಿಯಲ್ಲಿ ಯುವಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿತ್ತು. ಪವಿತ್ರ ಆರ್ಥಿಕತೆಯ ಕ್ರಾಂತಿಗೆ ಯುವಸಮೂಹವೇ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.
ಜೆ.ಪಿ. ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೊಸ ಸಭ್ಯತೆ ನಿರ್ಮಾಣ ಮಾಡುವ ಅಗತ್ಯವಿದೆ’ ಎಂದರು.
ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ, ‘ಪವಿತ್ರ ಆರ್ಥಿಕತೆ ಜಾರಿಗೆ ಒತ್ತಾಯಿಸಿ ಪ್ರಸನ್ನ ಉಪವಾಸ ಸತ್ಯಾಗ್ರಹ ಆರಂಭಿಸಿ ನಾಲ್ಕು ದಿನಗಳಾದರೂ, ಸರ್ಕಾರಿ ವೈದ್ಯರು ಬಂದು ಅವರ ಆರೋಗ್ಯ ತಪಾಸಣೆ ಮಾಡಲಿಲ್ಲ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಸೇವಾ ಸಂಘದ ವತಿಯಿಂದ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸರೋಜಮ್ಮ ಎಂ. ಚಂದ್ರಶೇಖರ್ ಅವರಿಗೆ ಜೆ.ಪಿ. ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.