ಬೆಂಗಳೂರು: ‘ಯಾರ ಬಳಿ ಪಡಿತರ ಚೀಟಿ ಇಲ್ಲವೋ ಅವರು ಇದೇ 26ರಿಂದ 31ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ 5 ಕೆ.ಜಿ.ಅಕ್ಕಿ ಪಡೆಯಬಹುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಶುಕ್ರವಾರ ನಗರದ ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದ ಕಮಲಮ್ಮನ ಗುಂಡಿ ಆಟದ ಮೈದಾನದಲ್ಲಿ 4 ಸಾವಿರ ಮಂದಿ ಆಟೊ, ಲಾರಿ, ಟೆಂಪೊ ಮತ್ತು ಬಸ್ ಚಾಲಕರಿಗೆ ಉಚಿತ ಆಹಾರ ಕಿಟ್ ವಿತರಿಸಿದ ಅವರು ಮಾತನಾಡಿದರು.
‘ಜೂನ್ 1 ರಿಂದ 10ರವರೆಗೆ ಪಡಿತರ ಚೀಟಿದಾರರಿಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಉಚಿತವಾಗಿ ನೀಡಲಾಗುವುದು’ ಎಂದರು.
‘ಆಟೊ ಚಾಲಕರಿಗೆ ನೀಡಲಾಗುವ ₹ 5 ಸಾವಿರ ದುಡ್ಡು ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬೇಕಿಲ್ಲ. ನನ್ನ ಕಚೇರಿಯಿಂದಲೂ ದಾಖಲೆ ಒದಗಿಸುವ ಕೆಲಸ ನಡೆಯಲಿದೆ. ಅದನ್ನು ಬಳಸಿಕೊಳ್ಳಬೇಕು’ ಎಂದರು.