ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಳಿಕ ಗರಿಗೆದರಿದ ಸಾಂಸ್ಕೃತಿಕ ಚಟುವಟಿಕೆ; ರಂಗಮಂದಿರಗಳಿಗೆ ಮರಳಿ ಬೇಡಿಕೆ

Published 28 ಮೇ 2023, 20:52 IST
Last Updated 28 ಮೇ 2023, 20:52 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಯಿಂದಾಗಿ ನಗರದಲ್ಲಿ ಕುಂಠಿತಗೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಈಗ ಗರಿಗೆದರಿದ್ದು, ರವೀಂದ್ರ ಕಲಾಕ್ಷೇತ್ರ ಸೇರಿ ವಿವಿಧ ಸರ್ಕಾರಿ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಿದೆ. 

ಚುನಾವಣಾ ಆಯೋಗವು ಮಾರ್ಚ್ 29ರಿಂದ ಮೇ 15ರವರೆಗೆ ಚುನಾವಣೆ ನೀತಿ ಸಂಹಿತೆಯನ್ನು ಜಾರಿ ಮಾಡಿತ್ತು. ಇದರಿಂದಾಗಿ ಪೂರ್ವನಿಯೋಜಿತ ಕೆಲ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಚುನಾವಣಾ ಆಯೋಗದಿಂದ ಅನುಮತಿ ಪತ್ರ ಪಡೆಯಬೇಕೆಂಬ ಕಾರಣಕ್ಕೆ ಕೆಲ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ನಡೆಸಿರಲಿಲ್ಲ. ಈಗ ಸಂಘ–ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಆಸಕ್ತಿ ತಾಳಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022–23ನೇ ಸಾಲಿನ ಧನಸಹಾಯಕ್ಕೆ ಸಂಬಂಧಿಸಿದಂತೆ ಮಾರ್ಚ್‌ ತಿಂಗಳಲ್ಲಿ ಆದೇಶ ಹೊರಡಿಸಿ, ಹಣ ಬಿಡುಗಡೆ ಮಾಡಿತ್ತು. ಇದರಿಂದಾಗಿಯೂ ಸಂಘ–ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಉತ್ಸಾಹ ತೋರಿವೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಂಗಮಂದಿರಗಳ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪೋರ್ಟಲ್ ರೂಪಿಸಿ, ಅವಕಾಶ ಕಲ್ಪಿಸಿದೆ. ಮೂರು ತಿಂಗಳು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ. ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್ ಮೂಲಕ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರ ಈಗಾಗಲೇ ಜೂನ್ ತಿಂಗಳಲ್ಲಿ 24 ಹಾಗೂ ಜುಲೈ ತಿಂಗಳಲ್ಲಿ 17 ದಿನಗಳು ಕಾಯ್ದಿರಿಸಲಾಗಿದೆ. ಇದೇ ರೀತಿ ನಯನ ಸಭಾಂಗಣ 16 ಹಾಗೂ 9, ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ 12 ಹಾಗೂ 9 ದಿನ ಕಾಯ್ದಿರಿಸಲ್ಪಟ್ಟಿವೆ. ಕೆಲ ದಿನ ಬೆಳಿಗ್ಗೆ ಮತ್ತು ಸಂಜೆ ಕಾರ್ಯಕ್ರಮವಿದೆ. 

ಠೇವಣಿ ಹಣ ವಾಪಸ್: ಸರ್ಕಾರಿ ರಂಗಮಂದಿರಗಳ ಕಾಯ್ದಿರಿಸುವಿಕೆಯಲ್ಲಿ ಪಾರದರ್ಶಕತೆ ತರಲು 2022ರ ಏ.1ರಿಂದ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸರ್ಕಾರಿ ನಿಯಮಗಳ ಅನುಸಾರ ನಿಗದಿಯಾದ ಕಾರ್ಯಕ್ರಮ ನಿಂತಲ್ಲಿ, ಹಣ ಹಿಂತಿರುಗಿಸುವ ಬದಲು, ಮತ್ತೊಂದು ದಿನಾಂಕ ಆಯ್ಕೆಗೆ ಅವಕಾಶ ನೀಡಲಾಗುತ್ತಿದೆ. ಮೂರು ದಿನಗಳಿಗಿಂತಲೂ ಹೆಚ್ಚಿನ ಅವಧಿ ಸತತವಾಗಿ ಸಭಾಂಗಣ ಕಾಯ್ದಿರಿಸಲು ಅವಕಾಶವಿಲ್ಲ. 

ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತಲಾ 28 ದಿನಗಳು ಕಾಯ್ದಿರಿಸಲಾಗಿದೆ. ಅದೇ ರೀತಿ, ನಯನ ಸಭಾಂಗಣ 26 ಹಾಗೂ 17 ದಿನಗಳು, ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ 18 ಹಾಗೂ 22 ದಿನಗಳು ಮುಂಚಿತವಾಗಿ ಬುಕ್ಕಿಂಗ್ ಆಗಿದ್ದವು. ಚುನಾವಣೆ ನೀತಿ ಸಂಹಿತೆ ಕಾರಣ ಕೆಲ ಸಂಸ್ಥೆಗಳು ಕಾರ್ಯಕ್ರಮ ರದ್ದು ಮಾಡಿದ್ದವು. ಆ ಸಂಸ್ಥೆಗಳಿಗೆ ಠೇವಣಿ ಹಣ ಮಾತ್ರ ವಾಪಸ್ ನೀಡಲಾಗಿದೆ. ಇಲಾಖೆ ವತಿಯಿಂದಲೇ ಕಾರ್ಯಕ್ರಮ ರದ್ದುಗೊಳಿಸಿದರೆ ಠೇವಣಿ ಜತೆಗೆ ಬಾಡಿಗೆ ಹಣ, ಜಿಎಸ್‌ಟಿ ಮೊತ್ತವನ್ನೂ ಮರಳಿಸಲಾಗುತ್ತದೆ.

ಸರ್ಕಾರಿ ರಂಗಮಂದಿರಗಳಿಗೆ ಬೇಡಿಕೆ ಹೆಚ್ಚಿದೆ. ರವೀಂದ್ರ ಕಲಾಕ್ಷೇತ್ರದ ಬಾಡಿಗೆ ಕೊಂಚ ಏರಿಸಿದರೂ ಕಲೆಗೆ ಪ್ರೋತ್ಸಾಹಿಸಲು ಕಡಿಮೆ ಬಾಡಿಗೆಯನ್ನೇ ನಿಗದಿ ಮಾಡಲಾಗಿದೆ.
ಎನ್. ನರೇಂದ್ರ ಬಾಬು ರವೀಂದ್ರ ಕಲಾಕ್ಷೇತ್ರದ ವ್ಯವಸ್ಥಾಪಕ
ಬಾಡಿಗೆ ಶೇ 5ರಷ್ಟು ಹೆಚ್ಚಳ
ಸರ್ಕಾರಿ ಆದೇಶದ ಅನ್ವಯ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ಶೇ 5ರಷ್ಟು ಹೆಚ್ಚಳ ಮಾಡಲಾಗಿದೆ. 2022ರಲ್ಲಿ ರಂಗಮಂದಿರಗಳ ಬಾಡಿಗೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಷ ಬಾಡಿಗೆ ದರವನ್ನು ಶೇ 5ರಷ್ಟು ಏರಿಕೆ ಮಾಡಬೇಕೆಂದು ತಿಳಿಸಿತ್ತು. ಅದರಂತೆ ಈಗ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ಹೆಚ್ಚಳ ಮಾಡಲಾಗಿದೆ. ಒಂದು ಪಾಳಿಗೆ ₹5 ಸಾವಿರ ಠೇವಣಿ ಹಾಗೂ ಜಿಎಸ್‌ಟಿ ಸಹಿತ ₹ 12080 ಇದ್ದ ಬಾಡಿಗೆ ದರ ಈಗ ₹ 12434ಕ್ಕೆ ಏರಿಕೆಯಾಗಿದೆ. ಠೇವಣಿ ಹಣವನ್ನು ಮರಳಿಸಲಾಗುತ್ತದೆ. ನಗರದಲ್ಲಿ ಇಲಾಖೆಯಡಿ ಏಳು ರಂಗಮಂದಿರ ಬರಲಿದ್ದು ಉಳಿದ ರಂಗಮಂದಿರದ ಬಾಡಿಗೆ ಹೆಚ್ಚಿಸಿಲ್ಲ. 
‘ಬಾಡಿಗೆ ಹಣದಿಂದ ನಿರ್ವಹಣೆ ಅಸಾಧ್ಯ’
‘ಸರ್ಕಾರಿ ರಂಗಮಂದಿರಗಳಿಗೆ ರಾಜ್ಯದಲ್ಲಿ ಅತೀ ಕಡಿಮೆ ಬಾಡಿಗೆ ನಿಗದಿಪಡಿಸಲಾಗಿದೆ. ಇದರಿಂದಾಗಿಯೇ ಸಂಘ–ಸಂಸ್ಥೆಗಳು ರವೀಂದ್ರ ಕಲಾಕ್ಷೇತ್ರ ಸೇರಿ ವಿವಿಧ ರಂಗಮಂದಿರಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಹೆಚ್ಚಿನ ಆಸಕ್ತಿ ತೋರುತ್ತಿವೆ. ವಿದ್ಯುತ್ ಬಿಲ್ ಸಿಬ್ಬಂದಿ ವೇತನ ನಿರ್ವಹಣೆ ಸೇರಿ ವಿವಿಧ ವೆಚ್ಚಗಳು ಹೆಚ್ಚುತ್ತಿವೆ. ಇಲಾಖೆಯೇ ಈ ಹಣವನ್ನು ಭರಿಸುತ್ತದೆ. ಬಾಡಿಗೆ ಹಣದಿಂದಲೇ ಸರ್ಕಾರಿ ರಂಗಮಂದಿರಗಳ ನಿರ್ವಹಣೆ ಸಾಧ್ಯವಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT