ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ‘ಕನ್ನಡ ಕಾಯಕ ವರ್ಷ’ ಕಾರ್ಯಕ್ರಮದ ಅಡಿ ನಗರದ ಕನಕಪುರ ರಸ್ತೆಯಲ್ಲಿ ಕನ್ನಡ ನಾಮಫಲಕ ಅಭಿಯಾನ ನಡೆಯಿತು.
ಕನಕಪುರ ಕನ್ನಡ ಬಳಗದ ಮುಖ್ಯಸ್ಥರಾದ ಭಾರ್ಗವಿ ಹೇಮಂತ್ ನೇತೃತ್ವದಲ್ಲಿ ಬಳಗದ ಸದಸ್ಯರು ಈ ಪ್ರದೇಶದ ಪ್ರಮುಖ ವ್ಯಾಪಾರ ಕೇಂದ್ರಗಳು, ಅಂಗಡಿಗಳಿಗೆ ತೆರಳಿ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಮನವಿ ಮಾಡಿದರು.
ಕನ್ನಡ ಜಾಗೃತಿ ಬರಹಗಳಿರುವ ಫಲಕಗಳನ್ನು ಹಿಡಿದು ವಿವಿಧ ಕಟ್ಟಡ, ಸಂಸ್ಥೆಗಳ ಮಾಲೀಕರು, ಮುಖ್ಯಸ್ಥರ ಬಳಿ ಜಾಗೃತಿ ಮೂಡಿಸಿದರು.
ಬಳಗದ ಮನವಿಗೆ ಸ್ಪಂದಿಸಿದ ಸಂಸ್ಥೆಗಳ ಮುಖ್ಯಸ್ಥರು ಕನ್ನಡ ಫಲಕ ಅಳವಡಿಸುತ್ತೇವೆ. ಇತರರಿಗೂ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಭರವಸೆ ನೀಡಿದರು.
ಬಳಗದ ಸದಸ್ಯರಾದ ಶಶಿಕಲಾ, ದಿಲೀಪ್, ಡಾ.ಕೆ.ಎಸ್. ಗೀತಾದೇವಿ, ಭಾನು, ಮಣಿ, ಹಿರಿಯ ನಟ ಆರಾಧ್ಯ ಶಿವಕುಮಾರ್ ಹಾಗೂ ದುಷ್ಯಂತ್ ಇದ್ದರು.