ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯಾಧ್ಯಕ್ಷ ಸುನಿಲ್ ಕಾಂತ್ ಹೆಳವರ್, ‘ನಮ್ಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗೆ ಸಿಗುತ್ತಿರುವ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಅಲೆಮಾರಿ ಮತ್ತು ಅರೆ–ಅಲೆಮಾರಿ ಸಮುದಾಯದ 46 ಜಾತಿಗಳು ಪ್ರವರ್ಗ–1ರಲ್ಲಿ ಇದ್ದು, ಇಲ್ಲಿರುವ ಪ್ರಬಲ ಸಮುದಾಯಗಳೊಡನೆ ಸ್ಪರ್ಧಿಸಲಾಗದೇ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿವೆ. ಆದ್ದರಿಂದ ಈ ಸಮುದಾಯಗಳಿಗೆ ಈ ಹಿಂದೆ ನೀಡಲಾಗಿದ್ದ ಹಿಂದುಳಿದ ಪಂಗಡದ ಸೌಲಭ್ಯ (ಬಿ.ಟಿ) ಸೇರಿಸಿ ಶೇ 3ರಷ್ಟು ಮಿಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.