ಬೆಂಗಳೂರು: ‘ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಅಸಂಘಟಿತ ವಲಯದಲ್ಲಿ ಶೇ 33ರಷ್ಟು ಕಾರ್ಮಿಕರು ಜೀತ ಕಾರ್ಮಿಕರಾಗಿ ಉಳಿದಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಸಮಾಜ ಕಾಳಜಿ ತೋರದೆ ಇರುವುದನ್ನು ಈ ಅಧ್ಯಯನ ಸಾಬೀತು ಪಡಿಸಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಕೃಷ್ಣ ಭಟ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಬೆಂಗಳೂರು ಗ್ರಾಮಾಂತರ ಜಿಲ್ಲಾ ವಕೀಲರ ಸಂಘ, ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ (ಐಜೆಎಂ) ಬುಧವಾರ ಆಯೋಜಿಸಿದ್ದ ‘ಜೀತ ಕಾರ್ಮಿಕ ಪದ್ಧತಿ ಮತ್ತು ಮಾನವ ಕಳ್ಳಸಾಗಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮಹಾತ್ಮ ಗಾಂಧೀಜಿಯವರು ಇಂದು ಜೀವಂತವಾಗಿ ಇದ್ದಿದ್ದರೆ ಜೀತ ಪದ್ಧತಿ ಕುರಿತು ಚರ್ಚೆ ನಡೆಸುತ್ತಿದ್ದರು. ನಾವೆಲ್ಲರೂ ಜೀತ ಕಾರ್ಮಿಕರ ಬಳಿ ತೆರಳಿ ಆತ್ಮವಿಶ್ವಾಸ ತುಂಬಬೇಕು. ಅವರಿಗೆ ಸರ್ಕಾರದ ಪ್ರಯೋಜನಗಳನ್ನು ತಲುಪಿಸಬೇಕು’ ಎಂದರು.