ಬೆಂಗಳೂರು: ‘ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್ಪಿಸಿಬಿ) ಮೂಲಕವೇ ಸಮ್ಮತಿ ಮೇಳ ಆಯೋಜಿಸಲಾಗುವುದು’ ಎಂದು ಕೆಎಸ್ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಹೇಳಿದರು.
ಮಾಲಿನ್ಯ ನಿಯಂತ್ರಣಾ ಮಂಡಳಿ ಕಾರ್ಯವಿಧಾನ ಸುಗಮಗೊಳಿಸುವ ನಿಟ್ಟಿನಲ್ಲಿರಾಜ್ಯ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಗುರುವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ಅವರು ಮಾತನಾಡಿದರು.
‘ಕೃಷಿಯಂತೆ ಕೈಗಾರಿಕೆಗಳು ಕೂಡ ಭಾರತದ ಆರ್ಥಿಕತೆಯ ಬೆನ್ನೆಲುಬು. ಕಾಸಿಯಾ ಸದಸ್ಯತ್ವ ಪಡೆದ 6.50 ಲಕ್ಷ ಕೈಗಾರಿಕೆಗಳಿದ್ದರೂ ಮಂಡಳಿಯಲ್ಲಿ ಒಂದು ಲಕ್ಷ ಮಾತ್ರ ನೊಂದಾಯಿಸಿಕೊಂಡಿದ್ದಾರೆ.ಸಮಸ್ಯೆ ಬಗೆಹರಿಸಿಕೊಳ್ಳಲು ಕೈಗಾರಿಕೆಗಳು ಮುಂದೆ ಬರಬೇಕು. ಸಹಕಾರ ನೀಡಲು ಮಂಡಳಿ ಸದಾ ಸಿದ್ಧವಿದೆ’ ಎಂದರು.
ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ, ಸಂಸ್ಥೆಯ ಪರಿಸರ ಮತ್ತು ಪರಿಸರ ವಿಜ್ಞಾನ ಸಮಿತಿಯ ಅಧ್ಯಕ್ಷ ಎಚ್.ಕೆ.ಮಲ್ಲೇಶಗೌಡ ಅವರು ಮನವಿ ಪತ್ರ ಸಲ್ಲಿಸಿದರು.