ಬೆಂಗಳೂರು: ‘ಕಿದ್ವಾಯಿ ಸಂಸ್ಥೆಯು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯಲು ಸರ್ಕಾರ, ಇನ್ಫೊಸಿಸ್ ಫೌಂಡೇಷನ್ ಮಹತ್ವದ ಕೊಡುಗೆ ನೀಡಿವೆ. ರೋಟರಿ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ಸಂಸ್ಥೆಗೆ ಅತ್ಯಾಧುನಿಕತೆಯ ಸ್ಪರ್ಶ ಲಭಿಸಿದೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.
ಸಂಸ್ಥೆಯ ಆವರಣದಲ್ಲಿರುವಡೇ ಕೇರ್ ವಾರ್ಡ್ನಲ್ಲಿ ಅತ್ಯಾಧುನಿಕ ತಂತ್ರ ಜ್ಞಾನದ 40 ಕಿಮೊ ಥೆರಪಿ ಕುರ್ಚಿಗಳನ್ನು ಅಳವಡಿಸಲಾಗಿದ್ದು, ಈ ಸೌಲಭ್ಯಕ್ಕೆ ಚಾಲನೆ ನೀಡಿ ಶುಕ್ರವಾರ ಅವರು ಮಾತನಾಡಿದರು.
‘ರೋಟರಿ ಬೆಂಗಳೂರು ಪಾಮ್ ವಿಲ್ಲೆ ಹಾಗೂ ಎಲ್ ಆ್ಯಂಡ್ ಡಬ್ಲ್ಯು ಸಂಸ್ಥೆಗಳು ಕಿದ್ವಾಯಿಗೆ ಸಹಕಾರ ನೀಡುತ್ತಿ ರುವುದು ಪ್ರಶಂಸನೀಯ’ ಎಂದರು.
ಎಲ್ ಆ್ಯಂಡ್ ಡಬ್ಲ್ಯು ಕಂಪನಿ ಪ್ರಧಾನ ವ್ಯವಸ್ಥಾಪಕ ಅಸೈತಂಬಿ ಮಾಣಿಕಂ, ‘ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮನುಷ್ಯರನ್ನು ದೀರ್ಘಕಾಲ ಕಾಡುವ ಕಾಯಿಲೆಗಳು. ಬಡ ರೋಗಿಗಳಿಗೆ ಕಿದ್ವಾಯಿಯಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಹೀಗಾಗಿಅತ್ಯಾಧುನಿಕ ತಂತ್ರಜ್ಞಾನದ 40 ಕಿಮೊ ಥೆರಪಿ ಕುರ್ಚಿಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.
ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಫಜಲ್ ಮೊಹಮ್ಮದ್,‘ನಮ್ಮ ಸಂಸ್ಥೆ ವತಿಯಿಂದ ಡಯಾಲಿಸಿಸ್ ಯಂತ್ರ, 2 ಇಟಿಓ, 1 ಫೈಬರ್ ಇಂಟ್ಯುಬೇಷನ್ ಎಂಡೋಸ್ಕೋಪ್, 1 ವಿಡಿಯೊ ಕ್ಯಾರಿಯೋಜೋಸ್ಕೋಪಿಯನ್ನೂ ಕಿದ್ವಾಯಿ ಸಂಸ್ಥೆಗೆ ಹಸ್ತಾಂತರಿಸಿದ್ದೇವೆ’ ಎಂದರು.