ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣವಾಗಿದ್ದ ವ್ಯಾಪಾರಿ, ಮೈಸೂರಿನಲ್ಲಿ ರಕ್ಷಣೆ

Last Updated 19 ಜುಲೈ 2019, 19:22 IST
ಅಕ್ಷರ ಗಾತ್ರ

ಬೆಂಗಳೂರು: ಅಂಗಡಿ ಬಂದ್ ಮಾಡಿ ಮನೆಗೆ ಹೊರಟಿದ್ದ ವೇಳೆ ದುಷ್ಕರ್ಮಿಗಳು ಅಪಹರಿಸಿದ್ದ ವ್ಯಾಪಾರಿ ಸತೀಶ್ ಬೊಹ್ರಾ ಎಂಬುವರನ್ನು ರಕ್ಷಿಸುವಲ್ಲಿ ಸಿಟಿ ಮಾರುಕಟ್ಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಸಿಟಿ ಮಾರುಕಟ್ಟೆಯ ಎಂಆರ್‌ಆರ್‌ ಲೇನ್‌ನಲ್ಲಿ ‘ಬೊಹ್ರಾ ಸ್ಟೀಲ್ಸ್’ ಅಂಗಡಿ ಇಟ್ಟುಕೊಂಡಿರುವ ಸತೀಶ್ ಅವರನ್ನು ಜುಲೈ 15ರಂದು ರಾತ್ರಿ ಅಪಹರಿಸಲಾಗಿತ್ತು. ಇವರ ತಂದೆ ನೀಡಿದ್ದ ದೂರು ಆಧರಿಸಿ ಮೈಸೂರಿನಲ್ಲಿ ಸತೀಶ್‌ ಅವರನ್ನು ರಕ್ಷಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವ್ಯಾಪಾರ ಮುಗಿಸಿ ನಿತ್ಯವೂ ರಾತ್ರಿ 8ಕ್ಕೆ ಸತೀಶ್ ಮನೆಗೆ ಹೋಗುತ್ತಿದ್ದರು. ಆದರೆ, ಜುಲೈ 15ರಂದು ಹೋಗಿರಲಿಲ್ಲ. ಅಹಮದಾಬಾದ್‌ನಲ್ಲಿದ್ದ ಅವರ ತಂದೆ ಮಂಗಿಲಾಲ್, ಮಗನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಗಾಬರಿಗೊಂಡ ಅವರು ಸೊಸೆಯನ್ನು ವಿಚಾರಿಸಿದಾಗ, ಸತೀಶ್ ಮನೆಗೆ ಬಾರದಿದ್ದದ್ದು ಗೊತ್ತಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಮೇ 16ರಂದು ಬೆಳಿಗ್ಗೆ ವಿಮಾನದಲ್ಲಿ ನಗರಕ್ಕೆ ಬಂದಿಳಿದ ಮಂಗಿಲಾಲ್, ಮಗನಿಗಾಗಿ ನಗರದೆಲ್ಲೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರವೇ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

‘ಸತೀಶ್‌ ಅವರನ್ನು ಅಪಹರಿಸಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT