ಯಲಹಂಕ: ಕೋಲಾರ ಜಿಲ್ಲೆ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ ಕಿಸಾನ್ ರೈಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿನ ರೈಲುನಿಲ್ದಾಣದಲ್ಲಿ ಮಂಗಳವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ’ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯ ಒದಗಿಸುವಲ್ಲಿ ಕಿಸಾನ್ ರೈಲು ಮಹತ್ವದ ಪಾತ್ರ ವಹಿಸಲಿದೆ. ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳನ್ನು ತ್ವರಿತಗತಿಯಲ್ಲಿ ಮಾರುಕಟ್ಟೆಗೆ ತಲುಪಿಸುವಲ್ಲಿ ಈ ರೈಲು ಸಹಕಾರಿಯಾಗಲಿದೆ‘ ಎಂದು ತಿಳಿಸಿದರು.
’ಕಿಸಾನ್ ರೈಲು ಯೋಜನೆಯಡಿ ಹಣ್ಣು-ತರಕಾರಿಗಳ ಸಾಗಣೆ ಮತ್ತು ಶೇಖರಣೆಗೆ ಶೇ 50 ರಷ್ಟು ಸಹಾಯಧನ ವಿತರಿಸಲು ಅವಕಾಶವಿದ್ದು, ರೈತರು, ರೈತ ವರ್ತಕರು ಹಾಗೂ ಇನ್ನಿತರ ಪಾಲುದಾರರು ರೈಲ್ವೆ ಸಾಗಣೆ ದರದಲ್ಲಿ ಶೇ 50ರಷ್ಟು ರಿಯಾಯಿತಿ ಪಡೆಯಬಹುದು. ರೈತರು ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯನ್ನು ಈ ಮೂಲಕ ಪೂರೈಸಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು‘ ಎಂದು ಹೇಳಿದರು.
‘ಕಿಸಾನ್ ರೈಲು ಆಗಸ್ಟ್ 2020ರಲ್ಲಿ ಆರಂಭವಾಗಿದ್ದು, ಇದು ರೈತರಿಗೆ ಕೃಷಿ ಉತ್ಪನ್ನಗಳನ್ನು ಒಟ್ಟುಗೂಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಈ ರೈಲಿಗೆ ಸರಕು ಶುಲ್ಕದಲ್ಲಿ ಶೇ 50ರಷ್ಟು ಮುಂಗಡ ಸಹಾಯಧನ ಒದಗಿಸಲಾಗಿದ್ದು, ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಲು ನೆರವಾಗಲಿದೆ‘ ಎಂದರು.
ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಎಸ್.ಟಿ.ಸೋಮಶೇಖರ್, ಆರ್.ಶಂಕರ್, ಶಾಸಕ ಎಸ್.ಆರ್.ವಿಶ್ವನಾಥ್, ಬೆಂಗಳೂರು ರೈಲ್ವೆ ವಿಭಾಗದ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮ ಉಪಸ್ಥಿತರಿದ್ದರು.