ಕೆ.ಆರ್.ಪುರ: ‘ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಶೇಕಡ 100ರಷ್ಟು ಮೀಸಲಾತಿಯನ್ನು ಕನ್ನಡಿಗರಿಗೇ ನೀಡಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಪಿ ಕೋದಂಡರಾಮಯ್ಯ ಒತ್ತಾಯಿಸಿದರು.
ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ಕನ್ನಡ ಸಾಹಿತ್ಯ ಪರಿಷತ್ತು ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಪ್ರತಿ ವರ್ಷ ನಾಡಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕು. ವರ್ಷ ಪೂರ್ತಿ ನಾಡ ಧ್ವಜ ಹಾರಾಡುತ್ತಿರಬೇಕು’ ಎಂದರು.
‘ಕನ್ನಡವು ಅನ್ನದ ಭಾಷೆಯಾಗಿಯೂ ಬೆಳೆಯಬೇಕು’ ಎಂದು ಅಭಿಪ್ರಾಯಪಟ್ಟರು.
ಕಸಾಪದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಮಾಯಣ್ಣ, ‘ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎಂಬ ಕಾನೂನು ತರಬೇಕು. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಸಬೇಕು’ ಎಂದರು.
ಬಸವನಪುರ ವಾರ್ಡ್ ಅಧ್ಯಕ್ಷೆ ವೈ ವರಲಕ್ಷ್ಮಮ್ಮ, ಮಹದೇವಪುರ ಕ್ಷೇತ್ರ ಅಧ್ಯಕ್ಷ ಡಾ. ಅಜಿತ್ ಕುಮಾರ್, ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ನ ಶಾಂತಾ ಕೃಷ್ಣಮೂರ್ತಿ, ಗುಂಜೂರು ರಾಮಕೃಷ್ಣಪ್ಪ, ಕರುನಾಡ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಮೆಹಬೂಬ್ ಪಾಷ, ಕರ್ನಾಟಕ ಕಾರ್ಮಿಕರ ಹಾಗೂ ನಾಗರಿಕರ ಸಂಘದ ರಾಜ್ಯಘಟಕದ ಅಧ್ಯಕ್ಷ ಶಿವಕುಮಾರ್ ನಾಯ್ಡು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.