ಬೆಂಗಳೂರು: ನಗರದ ಕೃಷ್ಣರಾಜ ವೃತ್ತ (ಕೆ.ಆರ್. ಸರ್ಕಲ್) ಒಂದು ವಾರದಲ್ಲಿ ಹೊಸ ರೂಪ ಪಡೆಯಲಿದೆ. ವೃತ್ತದ ಮಧ್ಯಭಾಗದಲ್ಲಿ ಕಾಬೂಲ್ ಶಿಲೆಗಳ ಮೂಲಕ ಆಕರ್ಷಕವಾಗಿ ಕಾಣುವಂತೆ ವಿನ್ಯಾಸಗೊಳಿಸಲಾಗುತ್ತಿದ್ದು, ಈ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶನಿವಾರ ಈ ಕಾಮಗಾರಿಯ ಪರಿಶೀಲನೆ ನಡೆಸಿದರು.
‘ಈ ವೃತ್ತದಲ್ಲಿ ವಿದ್ಯುತ್ ದೀಪ ಅಳವಡಿಕೆ, ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಭೂದೃಶ್ಯ ಅಲಂಕಾರ ಹಾಗೂ ಡಾಂಬರೀಕರಣ ಸೇರಿದಂತೆ ವಿವಿಧ ಕಾಮಗಾರಿ ಈ ತಿಂಗಳ ಕೊನೆಗೆ ಮುಗಿಯಲಿದೆ’ ಎಂದು ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಮಾಹಿತಿ ನೀಡಿದರು.
‘ನಗರದ ವಿವಿಧ ವೃತ್ತ, ಜಂಕಷನ್ಗಳನ್ನು ಅಭಿವೃದ್ಧಿಗೊಳಿಸುವ ಸಂದರ್ಭದಲ್ಲಿ ವಾಹನ ಸವಾವರರಿಗೆ ಯಾವುದೇ ಅನನುಕೂಲವಾಗದಂತೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಗೌರವ್ ಗುಪ್ತ ಸೂಚನೆ ನೀಡಿದರು.
ನಗರದಲ್ಲಿ ಬಿಬಿಎಂಪಿ ವತಿಯಿಂದ ಜಂಕ್ಷನ್ಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು, ಈಗಾಗಲೇ ಗಂಗಾನಗರ, ಸದಾಶಿವನಗರ, ದೊಮ್ಮಲೂರು, ಮತ್ತಿಕೆರೆ, ವಿಜಯನಗರ ಜಂಕ್ಷನ್ ಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.