ಬೆಂಗಳೂರು: ‘ದೇಶದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವಾಗ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳುವುದು ಹಾಸ್ಯಾಸ್ಪದ’ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರ್ಕಾರಿ ಶಿಕ್ಷಕರಸಂಘಗಳ ಒಕ್ಕೂಟ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಸಾವಿತ್ರಿ ಬಾಯಿ ಫುಲೆ ಅವರ ಸಾಧನೆ ಹೆಜ್ಜೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವೇದಗಳ ಕಾಲದಿಂದಲೂದಲಿತರು ಮತ್ತು ಮಹಿಳೆಯರನ್ನು ಶೋಷಿಸಿದ ಭಾರತವನ್ನು ಭವ್ಯ ಪರಂಪರೆಯ ನಾಡು ಎಂದು ಹೇಗೆ ಕರೆಯುವುದು.ನಮ್ಮ ಚರಿತ್ರೆ ಸುಳ್ಳಿನ ಕಂತೆ. ಶಿಕ್ಷಕರು ಇತಿಹಾಸ ಬೋಧಿಸುವಾಗ ಚರಿತ್ರೆಯ ಪೊಳ್ಳುಗಳನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಡಬೇಕು’ ಎಂದು ಹೇಳಿದರು.
‘ಆಮ್ ಆದ್ಮಿ ಪಕ್ಷ ಅಸ್ತಿತ್ವದಲ್ಲಿರುವ ದೆಹಲಿಯಲ್ಲಿಶಿಕ್ಷಣ ವ್ಯವಸ್ಥೆ ತುಂಬಾ ಸುಧಾರಿಸಿದೆ. ಇದನ್ನು ಇತರೆ ರಾಜ್ಯಗಳು ಅನುಸರಿಸಬೇಕು. ನಾವು ಅಳವಡಿಸಿಕೊಳ್ಳಬೇಕು. ರಾಜ್ಯದಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಸಮಸ್ಯೆಗಳಿಂದ ನರಳುತ್ತಿವೆ. ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.
ರಾಜ್ಯ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಿ.ಟಿ.ವೆಂಕಟೇಶಯ್ಯ ಮಾತನಾಡಿ,‘ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಪುಸ್ತಕ ಪ್ರಕಟಿಸಿದ್ದೇವೆ. ರಾಜ್ಯದಲ್ಲಿರುವ ಎಲ್ಲಾ ಶಾಲೆಗಳು ಈ ಪುಸ್ತಕವನ್ನು ಖರೀದಿಸಲು ಮುಂದಾಗಿವೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಶಿಕ್ಷಕರ ಸಮಸ್ಯೆ ಹೆಚ್ಚಿದೆ’ ಎಂದು ಒತ್ತಾಯಿಸಿದರು.