ಬೆಂಗಳೂರು: ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ210ನೇ ‘ಫಲಪುಷ್ಪ ಪ್ರದರ್ಶನ’ ಭಾನುವಾರ ಸಂಪನ್ನಗೊಂಡಿತು. ಈ ಬಾರಿಯ ಪ್ರದರ್ಶನವನ್ನು 4,58,600 ಮಂದಿ ಕಣ್ತುಂಬಿಕೊಂಡರು.
ಕೊನೆಯ ದಿನವೂ ವೀಕ್ಷಕರು ಉದ್ಯಾನದ ಪ್ರವೇಶ ದ್ವಾರಗಳ ಬಳಿ ಟಿಕೆಟ್ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಪ್ರದರ್ಶನದ ಮೊದಲ ದಿನದಿಂದಲೂ ಮೋಡ ಕವಿದ ವಾತಾವರಣವಿತ್ತು. ಕೆಲವು ದಿನ ಮಳೆಯೂ ಸುರಿದಿತ್ತು. ಹಾಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆ ಯಾಗಿದೆ. ಕಳೆದ ವರ್ಷ 4.99 ಲಕ್ಷ ಮಂದಿ ಪ್ರದರ್ಶನ ವೀಕ್ಷಿಸಿದ್ದರು. ಮೈಸೂರು ಸಂಸ್ಥಾನದ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಅವರ ಜೀವನ ಚಿತ್ರಣವನ್ನು ಪ್ರದರ್ಶನ ಕಟ್ಟಿಕೊಟ್ಟಿತ್ತು. ಒಡೆಯರ್ಅವರ ಜೀವನ ಚಿತ್ರಣ ಆಧರಿತ ಛಾಯಾಚಿತ್ರ ಪ್ರದರ್ಶನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿತ್ತು
ಪ್ಲಾಸ್ಟಿಕ್ ವಸ್ತುಗಳು ಉದ್ಯಾನದ ಒಳಗೆ ದಂತೆ ಇಲಾಖೆ ಎಚ್ಚರ ವಹಿಸಿತ್ತು. ಹಾಗಾಗಿ 30 ಸಾವಿರಕ್ಕೂ ಅಧಿಕ ಪ್ಲಾಸ್ಟಿಕ್ ಬಾಟಲಿಗಳು ಹಾಗೂ 8 ಚೀಲಗಳಿಗೂ ಹೆಚ್ಚು ಪ್ಲಾಸ್ಟಿಕ್ ಕವರ್ಗಳು ಪ್ರವೇಶ ದ್ವಾರಗಳಲ್ಲಿ ತಪಾಸಣೆ ವೇಳೆ ಸಂಗ್ರಹವಾಗಿವೆ.
‘ಯಾವುದೇ ತೊಂದರೆಗಳು ಆಗದಂತೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು. ಮುಖ್ಯವಾಗಿ ಪ್ಲಾಸ್ಟಿಕ್ ಸಮಸ್ಯೆ ಉಂಟಾಗದಂತೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.