ಬೆಂಗಳೂರು:‘ಎಂಬತ್ತರ ದಶಕದಲ್ಲಿ ನಾನು ಚಿತ್ರರಂಗ ಪ್ರವೇಶಿಸಿದಾಗ ನನಗೆ ಗೊತ್ತಿದ್ದ ಬೆರಳೆಣಿಕೆಯ ಪತ್ರಕರ್ತರಲ್ಲಿ ಪಿ. ಲಂಕೇಶ್ ಒಬ್ಬರು. ಬರಹಗಾರನಲ್ಲಿ ಪ್ರೀತಿಸುವ ಗುಣವಿರಬೇಕು. ಅಂತಹ ಗುಣ ಹೊಂದಿದ್ದ ಅವರು ಹೃದಯದಿಂದ ಬರೆಯುತ್ತಿದ್ದರು’ ಎಂದು ಚಿತ್ರನಟ ಶಿವರಾಜ್ಕುಮಾರ್ ಹೇಳಿದರು.
ಗಾಂಧಿಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಲಂಕೇಶ್ ಪತ್ರಿಕೆಯ 41ನೇ ಸಂಪುಟ ಬಿಡುಗಡೆ ಮಾಡಿ ಮಾತನಾಡಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ಒಬ್ಬ ವ್ಯಕ್ತಿ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಲಂಕೇಶ್ ಉದಾಹರಣೆ. ಅವರು ಸವ್ಯಸಾಚಿ ಬರಹಗಾರ. ಅವರನ್ನು ಸರಿಯಾಗಿ ಓದಿದರೆ ನಮ್ಮೊಳಗಿನ ಸಾಧ್ಯತೆಗಳ ಅರಿವು ನಮಗಾಗುತ್ತದೆ’ ಎಂದರು.
ಲಂಕೇಶರ ಬರಹ, ವಿಚಾರ ಹಾಗೂ ಅವರ ಬಗ್ಗೆ ಗಣ್ಯರು ಹೊಂದಿರುವ ಅಭಿಪ್ರಾಯಗಳಿರುವ ಆಡಿಯೊ ಬುಕ್ ಹಾಗೂ ಆ್ಯಪ್ ಅನ್ನು ಬಿಡುಗಡೆ ಮಾಡಲಾಯಿತು.