ಕೆಂಗೇರಿ: ಪುನುಗಮಾರನಹಳ್ಳಿ, ಮಾಳಗೊಂಡನಹಳ್ಳಿ, ಗಣಪತಿ ಹಳ್ಳಿ, ಪೆದ್ದಮಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಲವಾರು ದಿನಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಭಾನುವಾರ ಬೋನಿಗೆ ಬಿದ್ದಿದೆ. ಹತ್ತಾರು ಕುರಿಗಳು, ನಾಯಿಗಳು ಚಿರತೆ ದಾಳಿಗೆ ಬಲಿಯಾಗಿದ್ದವು.
ಮೂರು ದಿನಗಳ ಹಿಂದೆ ಗಣಪತಿಹಳ್ಳಿಯ ಮನೆಯೊಂದಕ್ಜೆ ನುಗ್ಗಿ ಟಗರೊಂದನ್ನು ಚಿರತೆ ಒಯ್ದಿತ್ತು. ಇದರಿಂದ ರೋಸಿ ಹೋಗಿದ್ದ ಗ್ರಾಮಸ್ಥರು ಅದರ ಬಂಧನಕ್ಕೆ ಆಗ್ರಹಿದ್ದರು.
15 ದಿನಗಳ ಹಿಂದೆ ಪುನುಗಮಾರನಹಳ್ಳಿರುವ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ರಶ್ಮಿ ಡಿಸೋಜ ಅವರ ತೋಟದಲ್ಲಿ ಬೋನು ಇಡಲಾಗಿತ್ತು. ‘ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಹಾರ ಅರಸಿ ಬಂದ 3 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ’ ಎಂದು ಕಗ್ಗಲೀಪುರ ವಲಯ ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
ಗಣಪತಿಹಳ್ಳಿ ಬೆಟ್ಟ ಗುಡ್ಡಗಳಿಂದ ಆವೃತವಾದ ಅರಣ್ಯ ಪ್ರದೇಶವಾಗಿತ್ತು. ಇಲ್ಲಿ ರಾಜೀವಗಾಂಧಿ ಆಶ್ರಯ ನಿವಾಸ ಯೋಜನೆಯಡಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಇದರಿಂದ ಇಲ್ಲಿದ್ದ ಚಿರತೆಗಳಿಗೆ ಆಹಾರ ದೊರಕದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಪ್ರಾಣಿಪ್ರಿಯರ ಆರೋಪ.