ಬೆಂಗಳೂರು: ನಾಯಿಯನ್ನು ಚಿರತೆಗಳು ಹೊತ್ತೊಯ್ಯುವುದು ನಿಮಗೆ ತಿಳಿದೇ ಇದೆ. ಆದರೆ ಇಲ್ಲಿ, ಚಿರತೆಯನ್ನೇ ನಾಯಿ ಬೆದರಿಸಿ ಓಡಿಸಿದ ಪ್ರಸಂಗ ನಡೆದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ತಾವರೆಕೆರೆ ಬಳಿಯಕವಿತಾ ಎಂಬುವವರಿಗೆ ಸೇರಿದದ್ವಾರಕ ಫಾರ್ಮ್ಗೆನಾಯಿ ಭೇಟೆಗಾಗಿ ಬಂದಿದ್ದ ಚಿರತೆಯನ್ನು ಅಲ್ಲಿದ್ದ ನಾಯಿಗಳು ಹೆದರಿಸಿ ಓಡಿಸಿದ ದೃಶ್ಯ ಅವರ ಮನೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಒಂದು ತಿಂಗಳ ಹಿಂದೆ ಹಾಗೂ ವಾರದ ಹಿಂದಷ್ಟೇ ಚಿರತೆ ನಮ್ಮ ಮನೆಗೆ ಬಂದಿತ್ತು.ಕೆಲ ವರ್ಷಗಳ ಹಿಂದೆ ನಾವು ಸಾಕಿದ್ದ ಮುದೋಳ ನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗಿತ್ತು. ನಿಯಮಿತವಾಗಿ ಚಿರತೆಗಳು ಬರುತ್ತಿರುವುದರಿಂದ ಸುರಕ್ಷತೆಗಾಗಿ 6 ನಾಯಿಗಳನ್ನು ನಾವು ಸಾಕಿದ್ದೇವೆ’ ಎಂದು ಕವಿತಾ ಹೇಳಿದರು.
‘ಬಹುಶಃ ಸಾವನದುರ್ಗ ಅಥವಾ ಅದರ ಸುತ್ತಮುತ್ತಲಿನ ಕಾಡಿನಿಂದ ಆ ಚಿರತೆ ಬರುತ್ತಿರಬಹುದು. ಪ್ರತಿ ವರ್ಷ ಬೇಸಿಗೆಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿತ್ತು. ನೀರಿನ ಲಭ್ಯತೆ ಇಲ್ಲದಿರುವುದರಿಂದಲೇ ಅವುಗಳು ನಾಡಿನತ್ತ ಬರುತ್ತವೆ. ಚಿರತೆ ಬರುತ್ತಿದೆ ಎಂದು ದೂರು ನೀಡಿದರೆ ಅರಣ್ಯ ಇಲಾಖೆಯವರು ಅದನ್ನು ಹಿಡಿಯುವ ಬಗ್ಗೆ ಆಲೋಚಿಸುತ್ತಾರೆಯೇ ಹೊರತು, ಸಮಸ್ಯೆಯ ಮೂಲವನ್ನು ಹುಡುಕುವುದೇ ಇಲ್ಲ. ಕಾಡಿನಲ್ಲಿ ಸೋಲಾರ್ ಬೋರ್ವೆಲ್ಗಳನ್ನು ಅಳವಡಿಸಿದರೆ, ಅಲ್ಲಿ ಕೆರೆಗಳು, ಹೊಂಡಗಳು ಭರ್ತಿಯಾಗುತ್ತವೆ. ಆಗ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ’ ಎಂದರು.
ಇದನ್ನೂ ಓದಿ:‘214 ಗ್ರಾಮಗಳಲ್ಲಿ ಮಾನವ–ಚಿರತೆ ಸಂಘರ್ಷ’
‘ಈ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಒಮ್ಮೆ ಸಲಹೆ ನೀಡಿದ್ದೇನೆ. ಆದರೆ, ಯಾವುದೇ ಪ್ರಯೋಜನವಾದಂತೆ ಕಾಣಲಿಲ್ಲ. ಅನೇಕ ವರ್ಷಗಳಿಂದ ಆ ಚಿರತೆ ಇಲ್ಲಿಗೆ ಬರುತ್ತಿದೆ. ಇಲ್ಲಿನ ಜನರೂ ಚಿರತೆಗೆ ಒಗ್ಗಿಕೊಂಡಿದ್ದಾರೆ. ಬೆಳಗ್ಗಿ ಹೊತ್ತು ಎಲ್ಲೊ ಅಡಗಿಕೊಂಡಿದ್ದು, ಮಧ್ಯರಾತ್ರಿ ವೇಳೆ ಭೇಟೆ ಅರಳಿ ಮನೆಗಳತ್ತಾ ಬರತ್ತವೆ. ನಾವು ಇಲ್ಲಿ 10 ವರ್ಷಗಳಿಂದ ವಾಸವಾಗಿದ್ದೇವೆ. ಪ್ರತಿ ಬೇಸಿಗೆಯಲ್ಲಿ ಅದರ ಹಾಜರಾತಿ ನಿಶ್ಚಿತ. ಈ ಬಾರಿ ಮಳೆಗಾಲದಲ್ಲೂ ಸರಿಯಾಗಿ ಮಳೆಯಾಗದ ಕಾರಣ ಈ ತಿಂಗಳಲ್ಲೂ ಚಿರತೆ ಕಾಣಿಸಿಕೊಂಡಿದೆ’ ಎಂದು ಹೇಳಿದರು.
ಚಿರತೆಗಳು ಕಾಡನ್ನು ಬಿಟ್ಟು ಆಹಾರ, ನೀರುಹುಡುಕಿಈಗ ನೇರವಾಗಿ ಮನೆಗಳಿಗೆಬರುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ನಾಡಿಗೆ ಬಂದ ವನ್ಯಜೀವಿಗಳನ್ನು ಹಿಡಿದು ಅಟ್ಟುವ ಬದಲು ಅವುಗಳಿಗೆ ಕಾಡಿನಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕು ಎಂಬ ಕೂಗು ಈಗ ಕೇಳಿ ಬರುತ್ತಿದೆ.
ಇದನ್ನೂ ಓದಿ:ಬೋನಿನೊಳಗೆ ಬಾರದ ಜಾಣ ಚಿರತೆ!
ನಿರಂತರವಾಗುತ್ತಿರುವ ಮಾನವ–ವ್ಯನ್ಯಜೀವಿ ಸಂಘರ್ಷಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಅನೇಕರ ವಾದ. ನಾಡಿಗೆ ನುಗ್ಗುವ ಪ್ರಾಣಿಗಳನ್ನು ಹಿಡಿದು ಮತ್ತೆ ಕಾಡಿಗೆ ಬಿಡುವ ಪ್ರಯತ್ನದ ಜೊತೆಗೆ ಕಾಡುಗಳನ್ನು ಸಂವೃದ್ಧಗೊಳಿಸುವ ಬಗ್ಗೆಯೂ ಅರಣ್ಯಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಕಾಡಿನಂಚಿನ ಜನರ ಮನವಿ.
ಬಿಬಿಎಂಪಿ ವ್ಯಾಪ್ತಿಯು 800 ಚದರ ಕಿ.ಮೀ ಪ್ರದೇಶದಷ್ಟಿದೆ. ಇದಕ್ಕೆ ಹೊಂದಿಕೊಂಡಂತೆ 24 ಕಡೆ ಅರಣ್ಯ ಪ್ರದೇಶ ಹರಡಿದೆ. ಮುಖ್ಯವಾಗಿ ಬನ್ನೇರುಘಟ್ಟ, ತುರಹಳ್ಳಿ, ತಾವರೆಕೆರೆ, ಹೆಸರಘಟ್ಟ ಸೇರಿದಂತೆ ಹಲವೆಡೆ ಅರಣ್ಯಗಳಿಂದ ವನ್ಯಜೀವಿಗಳು ನಗರಕ್ಕೆ ಬರುತ್ತಿರುತ್ತವೆ.
ನಗರಕ್ಕೆ ಹೊಂದಿಕೊಂಡ ಅರಣ್ಯಗಳಲ್ಲಿ ಯಾವ ವನ್ಯಜೀವಿಗಳಿವೆ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿಖರ ಮಾಹಿತಿ ಇಲ್ಲ. ಬೇಸಿಗೆಯಲ್ಲಿ ಅರಣ್ಯದಲ್ಲಿ ಆಹಾರ ಸಿಗದಿದ್ದಾಗ ಕೆಲ ಪ್ರಾಣಿಗಳು ನಗರ ಪ್ರದೇಶಗಳತ್ತ ದಾಳಿ ಇಡುತ್ತವೆ. ಮುಖ್ಯವಾಗಿ ಚಿರತೆಯು ನಾಯಿ ಬೇಟೆಗೆಂದು ಗಡಿ ಭಾಗದ ಪ್ರದೇಶಗಳಲ್ಲಿ ದಾಳಿ ನಡೆಸುತ್ತವೆ. ಮುಂಜಾನೆ ಹೊತ್ತಿನಲ್ಲೇ ನಾಯಿ ಬೇಟೆಯಾಡಿ ಮತ್ತೆ ತಮ್ಮ ಪ್ರದೇಶಕ್ಕೆ ತೆರಳುತ್ತವೆ.
ನಿರಂತರ ಓಡಾಟ
ಗಂಟೆಗೆ ಏಳೆಂಟು ಕಿ.ಮೀ ಕ್ರಮಿಸುವಷ್ಟು ವೇಗವಾಗಿಚಿರತೆಸಂಚರಿಸುತ್ತದೆ. ಆಹಾರ ಅರಸಿ ಹೊರಟಾಗ ಮತ್ತೆ ಸ್ವಸ್ಥಾನಕ್ಕೆ ಹಿಂದಿರುಗುತ್ತದೆ ಎಂಬ ಖಾತರಿ ಇರುವುದಿಲ್ಲ. ತನಗೆ ಸುರಕ್ಷಿತವೆನಿಸಿದ ಕಡೆ ಅದು ಆಶ್ರಯಪಡೆಯುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಪ್ರಮುಖ ಅರಣ್ಯ ಪ್ರದೇಶಗಳು
* ಗುಂಜೂರು ಅರಣ್ಯ
* ತುರಹಳ್ಳಿ ಅರಣ್ಯ
* ಹೆಸರಘಟ್ಟ
* ತಾವರೆಕೆರೆ
* ಬಿ.ಎಂ.ಕಾವಲ್
* ಬನ್ನೇರುಘಟ್ಟ
* ದಾಸನಾಯಕನಹಳ್ಳಿ
ವನ್ಯಜೀವಿ ಕಂಡಾಗ ಏನು ಮಾಡಬೇಕು?
* ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು.
* ವನ್ಯಜೀವಿ ಹೊರಹೋಗುವ ಮಾರ್ಗಗಳನ್ನು ಯಾವುದೇ ಕಾರಣಕ್ಕೂ ‘ಬಂದ್’ ಮಾಡಬಾರದು.
* ಇಲ್ಲದಿದ್ದರೆ ಅದು ಕಟ್ಟಡದೊಳಗೆ ನುಗ್ಗುವ ಅಪಾಯವಿರುತ್ತದೆ.
* ವನ್ಯಜೀವಿ ಮೇಲೆ ಕಲ್ಲು ತೂರುವುದು, ಬಲವಾದ ವಸ್ತುವಿನಿಂದ ಹಲ್ಲೆ ಮಾಡಬಾರದು.
* ವನ್ಯಜೀವಿ ಅವಿತುಕೊಂಡಿರುವ ಜಾಗದತ್ತ ಸುಳಿಯಬಾರದು.
* ಪ್ರಾಣಿಯನ್ನು ಗಾಬರಿಗೊಳಿಸಿದರೆ ಅದು ಹೆಚ್ಚು ಆಕ್ರಮಣಕಾರಿಯಾಗುತ್ತದೆ.
* ಪ್ರಾಣಿ ಸೆರೆಹಿಡಿಯುವ ಕಾರ್ಯಕ್ಕೆ ಅಡ್ಡಿಪಡಿಸದೆ ಸಹಕರಿಸಬೇಕು.
* ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯಪಡೆದುಕೊಳ್ಳುವುದು ಸೂಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.