ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ: ಜನರು ಏನಂತಾರೆ ?

Published 5 ಜೂನ್ 2024, 0:33 IST
Last Updated 5 ಜೂನ್ 2024, 0:33 IST
ಅಕ್ಷರ ಗಾತ್ರ

‘ಉದ್ಯೋಗಾವಕಾಶ ಆದ್ಯತೆಯಾಗಲಿ’

ಈ ಬಾರಿಯ ಫಲಿತಾಂಶವು ವಿಭಿನ್ನವಾಗಿದೆ. ಯಾವುದೇ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದರೂ ಯುವಜನರಿಗೆ ಉದ್ಯೋಗಾವಕಾಶ ಒದಗಿಸಲು ಆದ್ಯತೆ ನೀಡಲಿ. ಶಿಕ್ಷಣ ಕ್ಷೇತ್ರದಲ್ಲಿಯೂ ಸಾಕಷ್ಟು ಸುಧಾರಣೆ ತರಬೇಕಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಒದಗಿಸುವ ಕಡೆಗೂ ಸರ್ಕಾರವು ಗಮನಹರಿಸಬೇಕು.

– ದಿವ್ಯಶ್ರೀ ಹೆಗಡೆ, ವಿದ್ಯಾರ್ಥಿನಿ

‘ಜನರ ಅಭಿಪ್ರಾಯ ಗೌರವಿಸಿ’

ಲೋಕಸಭಾ ಚುನಾವಣೆಯ ಫಲಿತಾಂಶವು ಜನರ ಮನಸ್ಸಿನ ಕನ್ನಡಿಯಾಗಿದೆ. ಸರ್ಕಾರಗಳು ತಮ್ಮ ಸಾಧನೆ ಬಗ್ಗೆ ಎಷ್ಟೇ ಹೇಳಿಕೊಂಡರೂ ಜನರು ತಮ್ಮದೇ ಆದ ಮಾನದಂಡಗಳನ್ನು ಹೊಂದಿರುತ್ತಾರೆ. ಈ ಚುನಾವಣೆಯಲ್ಲಿ ದೇಶದ ಮತದಾರ ವಿವೇಚನೆಯಿಂದ ಮತ ಚಲಾಯಿಸಿದ್ದು, ಹೊಸ ಸರ್ಕಾರ ಜನರ ಬೇಕು ಬೇಡಗಳಿಗೆ ಆದ್ಯತೆ ನೀಡಬೇಕು. ರಾಜಕೀಯ ಪಕ್ಷಗಳು ಜನರ ಅಭಿಪ್ರಾಯವನ್ನು ಗೌರವಿಸಿ, ಮುನ್ನಡೆಯಬೇಕು. ದೇಶದ ಜ್ವಲಂತ ಸಮಸ್ಯೆಗಳ ಕುರಿತಂತೆ ಚರ್ಚೆಗಳಾಗಬೇಕು.

– ಶ್ರವಣ್‌, ವಿದ್ಯಾರ್ಥಿ

‘ಶಾಲಾ ಶುಲ್ಕಕ್ಕೆ ಕಡಿವಾಣ ಹಾಕಿ’

ವರ್ಷ ಕಳೆದಂತೆ ಶಾಲಾ-ಕಾಲೇಜುಗಳ ಶುಲ್ಕ ಏರುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಈಗಿನ ಶುಲ್ಕವು ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಲಕ್ಷಾಂತರ ರೂಪಾಯಿ ಶುಲ್ಕವನ್ನು ನೀಡಿ, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ತಮ ವೇತನದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ಅಲ್ಲದೆ, ನಿರುದ್ಯೋಗದ ಭೀತಿ ವಿದ್ಯಾರ್ಥಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ಉದ್ಯೋಗ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಬೇಕು.

– ಬಸವರಾಜ ಎಚ್‌.ಆರ್., ಖಾಸಗಿ ಕಂಪನಿ ಉದ್ಯೋಗಿ

‘ನಿರುದ್ಯೋಗ ಹೋಗಲಾಡಿಸಿ’

ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳನ್ನು ಬುಡಮೇಲು ಮಾಡುವ ಫಲಿತಾಂಶ ಬಂದಿದೆ. ಮತದಾರರು ಆಡಳಿತ ಪಕ್ಷಕ್ಕೆ ಎಚ್ಚರಿಕೆ ಮೂಲಕ ಬಹುಮತ ನೀಡಿದ್ದಾರೆ. ಹೊಸ ಸರ್ಕಾರ ಧರ್ಮ, ದೇವಸ್ಥಾನದ ಹೆಸರಿನಲ್ಲಿ ರಾಜಕೀಯ ಮಾಡದೇ ರೈತರು, ಬಡವರ ಪರವಾಗಿ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಬೇಕು. ನಿರುದ್ಯೋಗ, ಬಡತನ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು.

– ಮುರಳೀಧರ, ಬನಶಂಕರಿ

‘ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ’

ಒಂದು ಚುನಾವಣೆ ನೀಡಬಹುದಾದ ಸಮಾಧಾನಕರ ಫಲಿತಾಂಶವಿದು. ಬಿಜೆಪಿ ಅಂಕಿ–ಅಂಶಗಳಲ್ಲಿ ಗೆದ್ದಿದ್ದರೂ ದೇಶದ ಜನ ಸರ್ಕಾರದ ಮೇಲಿನ ತಮ್ಮ ಅಸಮಾಧಾನವನ್ನು ಮತಪತ್ರದ ಮೂಲಕ ತೋರಿದ್ದಾರೆ. ಹೊಸ ಸರ್ಕಾರ ಈ ಚುನಾವಣೆಯ ತೀರ್ಪನ್ನು ಗೌರವಿಸಿ, ಧೃವೀಕರಣ ರಾಜಕಾರಣವನ್ನು ಕೈಬಿಟ್ಟು, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಲಿ.

– ತ್ರಿಲೋಚನ ಕೆ.ಆರ್. ಸಾಫ್ಟ್‌ವೇರ್‌ ಉದ್ಯೋಗಿ

‘ನಿರುದ್ಯೋಗ ನಿವಾರಿಸಲಿ’

ಲೋಕಸಭಾ ಚುನಾವಣೆಯ ಫಲಿತಾಂಶ ನಿರೀಕ್ಷೆಯಂತೆ ಬರದಿದ್ದರೂ ಹೊಸ ಸರ್ಕಾರದ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಅದನ್ನು ನಿವಾರಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇಂದ್ರ ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿಕೊಳ್ಳಬೇಕು. ಇದರಿಂದ, ನಿರುದ್ಯೋಗ ಪ್ರಮಾಣ ಕಡಿಮೆಯಾಗಲಿದೆ.

– ಅರ್ಚನಾ ಆರ್, ಸಹಾಯಕ ಪ್ರಾಧ್ಯಾಪಕರು ಜಯನಗರ

‘ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ’

ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಅವೈಜ್ಞಾನಿಕ ನೀತಿಗಳು ಮತ್ತು ತಲೆಬುಡವಿಲ್ಲದ ಹೇಳಿಕೆಗಳು ಬಿಜೆಪಿ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಹೊಸ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಬಡತನ ಮತ್ತು ಗುಣಮಟ್ಟದ ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

– ದಿವ್ಯಾ ಶಿವಪುರ, ಚಂದ್ರಾ ಲೇಔಟ್‌

‘ಆಶ್ವಾಸನೆಗಳನ್ನು ಪೂರ್ಣಗೊಳಿಸಿ’

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಎನ್‌ಡಿಎ ಮೈತ್ರಿಕೂಟ ನೀಡಿರುವ ಆಶ್ವಾಸನೆಗಳು ಪೂರ್ಣಗೊಳಿಸಬೇಕು. ಸರ್ವರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬಿಜೆಪಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಆರೋಗ್ಯ, ಬೆಲೆ ಏರಿಕೆ, ಪೆಟ್ರೊಲ್–ಡೀಸೆಲ್ ಮತ್ತು ಅಡುಗೆ ಅನಿಲದ ದರಗಳನ್ನು ನಿಯಂತ್ರಿಸುವುದರ ಸಾರ್ವಜನಿಕರ ಜೀವನ ಗುಣಮಟ್ಟವನ್ನು ಉತ್ತಮಗೊಳಿಸಬೇಕು.

– ಅನುರಾಧ ಎಚ್., ವಿನಾಯಕನಗರ

ಶ್ರವಣ್‌
ಶ್ರವಣ್‌
ಬಸವರಾಜ ಎಚ್.ಆರ್.
ಬಸವರಾಜ ಎಚ್.ಆರ್.
ಮುರಳೀಧರ ಬನಶಂಕರಿ
ಮುರಳೀಧರ ಬನಶಂಕರಿ
ತ್ರಿಲೋಚನ ಕೆ.ಆರ್.
ತ್ರಿಲೋಚನ ಕೆ.ಆರ್.
ಅರ್ಚನಾ ಆರ್
ಅರ್ಚನಾ ಆರ್
ದಿವ್ಯಾ ಶಿವಪುರ
ದಿವ್ಯಾ ಶಿವಪುರ
ಅನುರಾಧ ಎಚ್.
ಅನುರಾಧ ಎಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT