ಬೆಂಗಳೂರು: ಕೊಳಚೆ ನೀರು ಸೇರಿ ವಿನಾಶದ ಅಂಚಿಗೆ ತಲುಪಿದ್ದ, ಹೊರವಲಯದ ಮಹದೇವ ಕೊಡಿಗೇಹಳ್ಳಿ ಕೆರೆಯನ್ನು ಶೆಲ್ ಇಂಡಿಯಾ ಸಂಸ್ಥೆ ಪುನರುಜ್ಜೀವನಗೊಳಿಸಿದ್ದು, ಜಲಮೂಲ ಈಗ ಹಸಿರಿನಿಂದ ನಳನಳಿಸುತ್ತಿದೆ.
ಎರಡು ವರ್ಷಗಳ ಹಿಂದೆ ಸಂಪೂರ್ಣ ಮಲಿನಗೊಂಡಿದ್ದ ಕೆರೆಗೆ ನೀರು ಒಳಹರಿವು ಸ್ಥಗಿತಗೊಂಡು ಬತ್ತುವ ಸ್ಥಿತಿ ತಲುಪಿತ್ತು. ಇದರಿಂದ ಜಲಮೂಲದ ಸುತ್ತಮುತ್ತ ಇರುವ ಮಹದೇವ ಕೊಡಿಗೇಹಳ್ಳಿ, ಕೊಂಡೇನಹಳ್ಳಿ, ಮಂಚಪನಹಳ್ಳಿ, ಎಂ.ಹೊಸಹಳ್ಳಿ, ಮರಳಕುಂಟೆ ಹಾಗೂ ಯಡಿಯೂರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು.
ಇದನ್ನು ಮನಗಂಡಶೆಲ್ ಇಂಡಿಯಾ ಸಂಸ್ಥೆಯು ಕೆರೆಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿ ಪುನಶ್ಚೇತನ ಕಾರ್ಯಕ್ಕೆ ಮುಂದಾಯಿತು. ಜಲಮೂಲದ ಒಳಹರಿವಿನ ಕಾಲುವೆಗಳ ವಿಸ್ತರಣೆ ಮಾಡಲಾಗಿದೆ. ಕೆರೆಯಲ್ಲಿದ್ದಹೂಳು ತೆಗೆದು ಮತ್ತೆ ಸೇರದಂತೆ ತಡೆಯಲು ಮಳೆ ನೀರು ಸಂಗ್ರಹಣಾ ಹೊಂಡಗಳನ್ನು ನಿರ್ಮಿಸಲಾಗಿದೆ.
ಸಂಸ್ಥೆಯ ಬೆಂಗಳೂರು ವಿಭಾಗದ ಮುಖ್ಯಸ್ಥ ಸದಾ ಅಯ್ಯರ್, ‘2017ರಲ್ಲಿ ಕೆರೆಯ ಪುನಶ್ಚೇತನ ಕಾರ್ಯ ಆರಂಭಿಸಿದೆವು. ಎರಡೇ ವರ್ಷಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ. ಎರಡನೇ ಹಂತದಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಮಾಡಲಿದ್ದೇವೆ’ ಎಂದರು.
‘ಸಂಸ್ಥೆಯ 393 ಸಿಬ್ಬಂದಿ ಸ್ವಯಂಪ್ರೇರಿತರಾಗಿ ಜಲಮೂಲದ ಸುತ್ತ 1,300 ಗಿಡಗಳನ್ನು ನೆಟ್ಟು ಜೈವಿಕ ಬೇಲಿ ನಿರ್ಮಿಸಿದ್ದಾರೆ. ಜಲಮೂಲದ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಅದನ್ನು ಗೃಹ ಬಳಕೆಗೆ ಬಳಸಬಹುದು ಎಂದುಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಪ್ರಮಾಣೀಕರಿಸಿದೆ’ ಎಂದು ತಿಳಿಸಿದರು.