ಕೆ.ಆರ್.ಪುರ: ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಹೋರಾಟಗಾರರು ರಸ್ತೆ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆ.ಆರ್.ಪುರದ ಐಟಿಐ ಬಸ್ ನಿಲ್ದಾಣದಿಂದ ಬಿಬಿಎಂಪಿ ಕಚೇರಿ ತನಕ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಹನ ಸಂಚಾರ ತಡೆದಿದ್ದ ವಾಟಾಳ್ ನಾಗರಾಜ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದರು.
ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, ‘ಮರಾಠಾ ಅಭಿವೃದ್ಧಿ ನಿಗಮ ರಚನೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ. ಕನ್ನಡಿಗರ ತಾಳ್ಮೆಯನ್ನು ಅವರು ಪರೀಕ್ಷೆ ಮಾಡುತ್ತಿದ್ದು, ಇದನ್ನು ವಿರೋಧಿಸಿ ಹಿಂದೆಂದೂ ನಡೆಯದ ರೀತಿಯ ಬಂದ್ ಕರ್ನಾಟಕದಲ್ಲಿ ಡಿ.5ರಂದು ನಡೆಯಲಿದೆ’ ಎಂದರು.
‘ಸಾಹಿತಿಗಳು, ಹೋರಾಟಗಾರರು, ವರ್ತಕರು, ಎಲ್ಲಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡುತ್ತಿವೆ. ಬಂದ್ ದಿನ ನೀರು, ಊಟ, ತಿಂಡಿ ಏನೇನೂ ಸಿಗುವುದಿಲ್ಲ. ಶಾಲಾ, ಕಾಲೇಜು, ಅಂಗಡಿ–ಮುಂಗಟ್ಟು, ಹೋಟೆಲ್ ಯಾವುದೂ ತೆರೆಯುವುದಿಲ್ಲ. ಅಂದ ಮನೆಯಿಂದ ಯಾರೂ ಹೊರಗೆ ಬರಬಾರದು’ ಎಂದು ಮನವಿ ಮಾಡಿದರು
‘ಈ ಹಿಂದೆ ತಿರುವಳ್ಳುವರ್ ಪ್ರತಿಮೆ ತಂದು ತಮಿಳರ ಪರವಾಗಿ ನಿಂತಿದ್ದ ಸರ್ಕಾರ, ಈಗ ಮರಾಠರ ಪರವಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ನಿಪ್ಪಾಣಿ, ಕಾರವಾರ, ಬೆಳಗಾವಿ ಮಹಾರಾಷ್ಟ್ರ ಪಾಲಾಗುವುದರಲ್ಲಿ ಅನುಮಾನ ಇಲ್ಲ. ಬಸವ ಕಲ್ಯಾಣದಲ್ಲಿ ಉಪಚುನಾವಣೆ ಗೆಲ್ಲಲು ಯಡಿಯೂರಪ್ಪ ದೊಡ್ಡ ನಾಟಕವನ್ನೇ ಆಡುತ್ತಿದ್ದಾರೆ’ ಎಂದರು.