ಬೆಂಗಳೂರು: ದೇಶದ್ರೋಹದ ಆರೋಪದಡಿ ಬಂಧನಕ್ಕೆ ಒಳಗಾಗಿ ವಿಶೇಷ ತನಿಖಾ ತಂಡದ (ಎಸ್ಐಟಿ) ವಶದಲ್ಲಿದ್ದ ಅಮೂಲ್ಯಾ ಲಿಯೋನಾಳಿಗೆ ಐದನೇ ಎಸಿಎಂಎಂ ನ್ಯಾಯಾಲಯ ಮಾರ್ಚ್ 5ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಚಾರಣೆಗಾಗಿ ಅಮೂಲ್ಯಾಳನ್ನು ಫೆ. 25 ಐದು ದಿನಗಳ ಅವಧಿಗೆ ಎಸ್ಐಟಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಪೊಲೀಸ್ ಕಸ್ಟಡಿ ಮುಕ್ತಾಯಗೊಂಡ ಕಾರಣ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಯಿತು.
ಬಸವೇಶ್ವರನಗರ ಠಾಣೆಯಲ್ಲಿ ಬಿಗಿ ಭದ್ರತೆಯಲ್ಲಿ ಅಮೂಲ್ಯಾಳ ವಿಚಾರಣೆ ನಡೆಯಿತು. ಆಕೆ ವಾಸವಾಗಿದ್ದ ಪೇಯಿಂಗ್ ಗೆಸ್ಟ್ ಮತ್ತು ಆಕೆಗೆ ಮಾರ್ಗದರ್ಶಕರಾಗಿದ್ದರು ಎನ್ನಲಾದ ಕೆಲವು ವ್ಯಕ್ತಿಗಳ ಜತೆ ಸಭೆ ನಡೆಸಿದ್ದ ಸ್ಥಳವನ್ನು ಇದೇ ಸಂದರ್ಭದಲ್ಲಿ ಮಹಜರು ಮಾಡಲಾಗಿದೆ. ‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶಿಸಿದ ಆರ್ದ್ರಾಳ ಜೊತೆ ಕೆಲವು ತಿಂಗಳು ಒಂದೇ ಕೊಠಡಿಯಲ್ಲಿ ವಾಸವಾಗಿದ್ದ ಬಗ್ಗೆ ವಿಚಾರಣೆ ವೇಳೆ ಅಮೂಲ್ಯಾ ಒಪ್ಪಿಕೊಂಡಿದ್ದಾಳೆ.
‘ಪ್ರಚೋದನಾಕಾರಿ ಭಾಷಣ ಮಾಡುವಂತೆ ಸೂಚಿಸುತ್ತಿದ್ದವರ ಹೆಸರನ್ನೂ ಅಮೂಲ್ಯಾ ಬಹಿರಂಗಪಡಿಸಿದ್ದಾಳೆ. ಆದರೆ, ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ವಿವಿಧ ತಂಡಗಳಿಂದ ವಿಚಾರಣೆ: ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆ (ಐಬಿ), ನಕ್ಸಲ್ ನಿಗ್ರಹ ಪಡೆ(ಎಎನ್ಎಫ್) ಮತ್ತು ಇತರ ತನಿಖಾ ಸಂಸ್ಥೆಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಅಮೂಲ್ಯಾಳನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿವೆ.
‘ಮೊದಲು ಹೇಳಿಕೆ ನೀಡಲು ಹಿಂದೇಟು ಹಾಕಿದ ಅಮೂಲ್ಯಾ, ಬಳಿಕ ವಿಚಾರಣೆಗೆ ಸಹಕರಿಸಿದ್ದಾಳೆ. ಯಾವ ನಕ್ಸಲ್ ಗುಂಪಿನ ಜತೆ ಆಕೆ ಸಂಪರ್ಕ ಹೊಂದಿದ್ದಳು ಎಂಬ ಬಗ್ಗೆ ಪ್ರಶ್ನಿಸಲಾಗಿದೆ’ ಎಂದು ಪೊಲೀಸ್ರು ಹೇಳಿದರು.
‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನದಲ್ಲಿರುವ ಆರ್ದ್ರಾಳ ಜಾಮೀನು ಅರ್ಜಿ ವಿಚಾರಣೆಯನ್ನು ಆರನೇ ಎಸಿಎಂಎಂ ನ್ಯಾಯಾಲಯ ಮಾ. 2ಕ್ಕೆ ಮುಂದೂಡಿದೆ.
ಜಾಮೀನು ಕೋರಿ ಆರ್ದ್ರಾ ಅರ್ಜಿ ಸಲ್ಲಿಸಿದ್ದಳು. ಅದನ್ನು ಆಕ್ಷೇಪಿಸಿ ಪೊಲೀಸರು ಹಾಗೂ ಸರ್ಕಾರಿ ವಕೀಲರು ಅರ್ಜಿ ಸಲ್ಲಿಸಿದ್ದು, ‘ಇದೊಂದು ಸೂಕ್ಷ್ಮ ಪ್ರಕರಣ. ಅಮೂಲ್ಯಾ ಮತ್ತು ಆರ್ದ್ರಾ ಪ್ರಕರಣಗಳಿಗೆ ಸಂಬಂಧವಿದೆ. ತನಿಖಾ ವರದಿ ಆಧರಿಸಿ ವಾದ ಮಂಡಿಸಬೇಕಿದೆ. ಹೀಗಾಗಿ ಕಾಲಾವಕಾಶ ಬೇಕಿದೆ’ ಎಂದು ಕೋರ್ಟ್ಗೆ ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ಕೋರ್ಟ್ ಮಾ. 2ರಂದು ವಾದ ಮಂಡಿಸುವಂತೆ ಸೂಚಿಸಿದರು.
ಆದ್ರಾ ಜಾಮೀನು ಅರ್ಜಿ ಮಾ. 2ಕ್ಕೆ
‘ಫ್ರೀ ಕಾಶ್ಮೀರ’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನದಲ್ಲಿರುವ ಆರ್ದ್ರಾಳ ಜಾಮೀನು ಅರ್ಜಿ ವಿಚಾರಣೆಯನ್ನು ಆರನೇ ಎಸಿಎಂಎಂ ನ್ಯಾಯಾಲಯ ಮಾ. 2ಕ್ಕೆ ಮುಂದೂಡಿದೆ.
ಜಾಮೀನು ಕೋರಿ ಆರ್ದ್ರಾ ಅರ್ಜಿ ಸಲ್ಲಿಸಿದ್ದಳು. ಅದನ್ನು ಆಕ್ಷೇಪಿಸಿ ಪೊಲೀಸರು ಹಾಗೂ ಸರ್ಕಾರಿ ವಕೀಲರು ಅರ್ಜಿ ಸಲ್ಲಿಸಿದ್ದು, ‘ಇದೊಂದು ಸೂಕ್ಷ್ಮ ಪ್ರಕರಣ. ಅಮೂಲ್ಯಾ ಮತ್ತು ಆರ್ದ್ರಾ ಪ್ರಕರಣಗಳಿಗೆ ಸಂಬಂಧವಿದೆ. ತನಿಖಾ ವರದಿ ಆಧರಿಸಿ ವಾದ ಮಂಡಿಸಬೇಕಿದೆ. ಹೀಗಾಗಿ ಕಾಲಾವಕಾಶ ಬೇಕಿದೆ’ ಎಂದು ಕೋರ್ಟ್ಗೆ ಮನವಿ ಮಾಡಿದರು. ಅದನ್ನು ಪುರಸ್ಕರಿಸಿದ ಕೋರ್ಟ್ ಮಾ. 2ರಂದು ವಾದ ಮಂಡಿಸುವಂತೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.