ಬೆಂಗಳೂರು: ಬೆಂಗಳೂರು ದಕ್ಷಿಣ ವ್ಯಾಪ್ತಿಯ ನಾಗರಿಕರಿಗೆ ಸರ್ಕಾರಿ ಸೇವೆಗಳ ಮಾಹಿತಿ ಹಾಗೂ ವಿವಿಧ ಯೋಜನೆಗಳ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ‘ಸಂಚಾರ ಸಾಮಾನ್ಯ ಸೇವಾ ಕೇಂದ್ರ’ಕ್ಕೆ ಸಂಸದ ತೇಜಸ್ವಿ ಸೂರ್ಯ ಶನಿವಾರ ಚಾಲನೆ ನೀಡಿದರು.
‘ಸರ್ಕಾರದ ಸೇವೆಗಳಾದ ಸೇವಾ ಸಿಂಧು, ವೃದ್ಧಾಪ್ಯ ವೇತನ, ಜನನ ಪ್ರಮಾಣಪತ್ರ, ಮರಣ ಪ್ರಮಾಣ ಪತ್ರ, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ್ ಹಾಗೂ ಮತದಾರರ ಗುರುತಿನ ಚೀಟಿ ಮೊದಲಾದ ಸೇವೆಗಳನ್ನು ಈ ಸಂಚಾರ ವಾಹನದ ಮೂಲಕ ಸಾರ್ವಜನಿಕರು ಪಡೆಯಬಹುದು’ ಎಂದು ತೇಜಸ್ವಿ ಸೂರ್ಯ ಹೇಳಿದರು.
’ಸಂಚಾರ ಸಾಮಾನ್ಯ ಸೇವಾ ಕೇಂದ್ರಗಳು ಲಭ್ಯ ಇರುವ ಸ್ಥಳಗಳ ಮಾಹಿತಿ ಹಾಗೂ ದಿನಾಂಕವನ್ನು ಜನರಿಗೆ ತಿಳಿಸಲಾಗುವುದು. ತಮ್ಮ ಹತ್ತಿರದ ಸ್ಥಳಗಳಿಂದಲೇ ಸಾರ್ವಜನಿಕರು ಈ ಸೇವೆಗಳನ್ನು ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿಎಸ್ಸಿ ಮತ್ತು ಇ-ಗವರ್ನನ್ಸ್ ಮುಖ್ಯಸ್ಥ ಎಸ್.ಪಿ. ಕುಲಕರ್ಣಿ, ಸಿಎಸ್ಸಿ ಸೊಸೈಟಿ ಅಧ್ಯಕ್ಷ ಜಗದೀಶ್, ಆಕ್ಟ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಗಗನ್ ನಂದಿ ಹಾಗೂ ಇತರರು ಇದ್ದರು.