ಬೆಂಗಳೂರು: 51 ವರ್ಷಗಳ ಇತಿಹಾಸದಲ್ಲೇ ದಾಖಲೆಯ ಮಳೆ ಸುರಿದ ಪರಿಣಾಮ ನಗರದ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿರುವ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಇನ್ಸ್ಟಾಗ್ರಾಂನಲ್ಲಿ ದೋಸೆ ಫೋಟೊ ನೋಡಿ ಟೆಂಪ್ಟ್ ಆಗಿ ಪದ್ಮನಾಭ ನಗರದ ಹೋಟೆಲ್ಗೆ ಭೇಟಿ ನೀಡಿರುವ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿದೆ.
ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನರು ಸಂಕಷ್ಟ ಪಡುತ್ತಿದ್ದಾಗ ಬೇಜವಾಬ್ದಾರಿ ಸಂಸದ ಹೋಟೆಲ್ ಒಂದನ್ನು ಪ್ರಚಾರ ಮಾಡುತ್ತಾ, ದೋಸೆಯ ರುಚಿಯನ್ನು ಸವಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ನಡೆಯನ್ನು ಪ್ರತಿಪಕ್ಷಗಳು ಮತ್ತು ಜನರು ಟೀಕಿಸಿದ್ದಾರೆ.
ವಿಡಿಯೊದಲ್ಲಿ ತೇಜಸ್ವಿ ಸೂರ್ಯ, 'ಪದ್ಮನಾಭ ನಗರದ ಸಾತ್ವಿ ಕಿಚನ್ಗೆ ಬಂದಿದ್ದೆ. ಇನ್ಸ್ಟಾಗ್ರಾಂನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್ಆಗಿ ಇಲ್ಲಿಗೆ ಬಂದಿದ್ದು. ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ. ನೀವೂ ಬನ್ನಿ. ತಿಂದಾಗ್ಲೇನೆ ಆಸ್ವಾದನೆ ನಿಮಗೆ ಗೊತ್ತಾಗುವುದು. ಉಪ್ಪಿಟ್ಟು ಬಹಳ ಚೆನ್ನಾಗಿದೆ. ಬನ್ನಿ' ಎಂದು ಜನರನ್ನು ಆಹ್ವಾನಿಸುತ್ತಿರುವುದು ಇದೆ.
ರೋಮ್ಗೆ ಬೆಂಕಿ ಬಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬುದು ಹಳೆಯ ಮಾತಾಗಿದೆ. ಬೆಂಗಳೂರಲ್ಲಿ ಪ್ರವಾಹವಾದಾಗ ನಮ್ಮ ದಕ್ಷಿಣದ ಸಂಸದ ಸಂಭ್ರಮ ಪಡುತ್ತಿದ್ದರು ಎಂಬುದು ಈಗಿನ ಮಾತಾಗಿದೆ. ಈ ವಿಡಿಯೊ ಸೆಪ್ಟೆಂಬರ್ 5ರಂದು ಸೋಮವಾರ ತೆಗೆದದ್ದಾಗಿದೆಎಂದು ನಿತ್ಯಾನಂದ ಶೆಟ್ಟಿ ಎಂಬುವವರು ಫೇಸ್ಬುಕ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಯಾವುದಾದರು ಒಂದು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆಯೇ ಎಂದು ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಪ್ರಶ್ನಿಸಿದ್ದಾರೆ.
Video dated 5th September.@Tejasvi_Surya was enjoying a good breakfast while Bangalore was drowning.
— Lavanya Ballal (@LavanyaBallal) September 6, 2022
Has he visited even a single flood affected region? pic.twitter.com/uFnZ4Rjs1m
ಸೋಮವಾರ ಇಡೀ ದಕ್ಷಿಣ ಬೆಂಗಳೂರು ಮಳೆ ನೀರಿನಲ್ಲಿ ಮುಳುಗುತ್ತಿದ್ದರೆ ಈ ಚೈಲ್ಡ್ ಚಪಾತಿ ತೇಜಸ್ವಿ ಸೂರ್ಯ ಅದ್ಯಾವುದೋ ಹೋಟೆಲ್ನಲ್ಲಿ ಬೆಣ್ಣೆ ದೋಸೆ ತಿನ್ನೋಕೆ ಕರೆಯುತ್ತಿದ್ದಾನೆ ಎಂದು ಪ್ರದೀಪ್ ಶೆಟ್ಟಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಸೋಮವಾರ ಇಡೀ ದಕ್ಷಿಣ ಬೆಂಗಳೂರು ಮಳೆ ನೀರಿನಲ್ಲಿ ಮುಳುಗುತ್ತಿದ್ದರೆ ಈ ಚೈಲ್ಡ್ ಚಪಾತಿ @Tejasvi_Surya ಅದ್ಯಾವುದೋ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ತಿನ್ನೋಕೆ ಕರೆಯುತ್ತಿದ್ದಾನೆ. pic.twitter.com/mEOvVydVdJ
— ಪ್ರದೀಪ್ ಶೆಟ್ಟಿ (@pradeepshettyn) September 6, 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.