ಬೆಂಗಳೂರು: ಮರಾಠ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೆ, ನದಾಫ್, ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಕೂಗು ಎದ್ದಿದೆ.
ರಾಜ್ಯದಲ್ಲಿ ನದಾಫ, ಪಿಂಜಾರ ಸಮುದಾಯ ಸುಮಾರು 38 ಲಕ್ಷ ಜನ ಸಂಖ್ಯೆ ಹೊಂದಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ 1.30 ಲಕ್ಷ ನದಾಫ ಸಮುದಾಯವರಿದ್ದಾರೆ. ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ಸಮುದಾಯ ತೀರಾ ಹಿಂದುಳಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್. ದ್ವಾರಕನಾಥ ಅವರು ಸಲ್ಲಿಸಿದ ವರದಿಯಲ್ಲಿದೆ.
ದ್ವಾರಕನಾಥ ಅವರು ಸಲ್ಲಿಸಿದ್ದ ವರದಿ ಆಧರಿಸಿ ಈಗಾಗಲೇ ವಿಶ್ವಕರ್ಮ, ಲಂಬಾಣಿ, ಬೋವಿ, ಉಪ್ಪಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಹೀಗಾಗಿ ನದಾಫ, ಪಿಂಜಾರ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಈ ಸಮುದಾಯದ ಕಲಬುರ್ಗಿ ಜಿಲ್ಲಾ ಘಟಕ ಒತ್ತಾಯಿಸಿದೆ.