ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರದರ್ಶಕ ಹಾಗೂ ಲಲಿತಕಲೆಗಳ ಗುಂಪು ಕಾದಂಬರಿ ಜಂಟಿಯಾಗಿ ಇದೇ 9 ಮತ್ತು 10ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಮ್ಮ ಜಾತ್ರೆ ಹಮ್ಮಿಕೊಂಡಿವೆ.
‘ಅನ್ ಬಾಕ್ಸಿಂಗ್ ಬಿಎಲ್ಆರ್ ಹಬ್ಬ’ದ ಅಡಿ ಈ ಜಾತ್ರೆ ಆಯೋಜಿಸಲಾಗುತ್ತಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಆನೆ, ರಥ, ಹೂವಿನ ಪಲ್ಲಕ್ಕಿ ಹಾಗೂ ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಎರಡು ದಿನಗಳ ಜಾತ್ರೆ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಎರಡು ದಿನಗಳ ಈ ಜಾತ್ರೆಯು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೈಜ ಜಾನಪದ ಸಂಪ್ರದಾಯವನ್ನು ಈ ಜಾತ್ರೆಯಲ್ಲಿ ಅನುಭವಿಸಬಹುದಾಗಿದೆ. ಎರಡು ನೂರು ಕಲಾವಿದರಿಂದ ಜಾನದಪ ನೃತ್ಯ ಪ್ರದರ್ಶನ ನಡೆಯಲಿದೆ. ಕರಕುಶಲ ಮಳಿಗೆಗಳು ಜಾತ್ರೆಯಲ್ಲಿ ಇರಲಿದ್ದು, ತಯಾರಕರಿಂದ ನೇರವಾಗಿ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಉಚಿತವಾಗಿ ಎತ್ತಿನ ಗಾಡಿಯ ಸವಾರಿಯನ್ನೂ ಅನುಭವಿಸಬಹುದು. ಸ್ಥಳೀಯ ಆಹಾರ ವೈವಿಧ್ಯತೆಯನ್ನು ಆಸ್ವಾದಿಸಬಹುದು ಎಂದು ಇಲಾಖೆ ತಿಳಿಸಿದೆ.
ಸಂಜೆ 6 ಗಂಟೆಯಿಂದ ಸಂಸ ಬಯಲು ರಂಗಮಂದಿರದಲ್ಲಿ ಬೊಂಬೆಯಾಟ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಪ್ರದರ್ಶನಗಳು ನಡೆಯಲಿವೆ. ನಮ್ಮ ಹಳ್ಳಿ ಜೀವನ, ಆಚರಣೆಯನ್ನು ಈ ಜಾತ್ರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರವೇಶ ಉಚಿತ ಇರಲಿದೆ ಎಂದು ಹೇಳಿದೆ.