ಯಲಹಂಕ: ‘ಜಗತ್ತಿನ ಪ್ರಚಲಿತ ವಿದ್ಯಮಾನಗಳನ್ನು ಅವಿರತವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಿಕಾ ವಿತರಕರ ಸೇವೆ ಅನನ್ಯ. ಪತ್ರಿಕೋದ್ಯಮದ ಅಭಿವೃದ್ಧಿಯಲ್ಲಿ ಇವರ ಕಾರ್ಯವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ದಿನಪತ್ರಿಕೆ ವಿತರಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
'ವಿತರಕರ ಜೀವನ ತುಂಬಾ ಕಷ್ಟಕರ. ಪತ್ರಿಕೋದ್ಯಮದ ಗಟ್ಟಿಯಾದ ಬೇರುಗಳಾಗಿದ್ದಾರೆ. ಅವರ ಪರಿಶ್ರಮದಿಂದಲೇ ಪತ್ರಿಕೋದ್ಯಮ ಉಳಿದಿದೆ' ಎಂದು ಶ್ಲಾಘಿಸಿದರು.
ಪಾಲಿಕೆ ಮಾಜಿ ಸದಸ್ಯ ಎಂ.ಸತೀಶ್ ಮಾತನಾಡಿ, ’ಜನರಿಗೆ ಮಾಹಿತಿ, ಮನರಂಜನೆ ನೀಡುವುದರ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪತ್ರಿಕಾ ವಿತರಕರೂ ಸಹ ಭಾಗಿಯಾಗಿದ್ದಾರೆ. ಬೆಳಿಗ್ಗೆಯೇ ಎದ್ದು, ಚಳಿ, ಮಳೆ, ಗಾಳಿ ಎನ್ನದೇ ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಪತ್ರಿಕೆಗಳನ್ನು ತಲುಪಿಸುವ ಕಾಯಕದಲ್ಲಿ ತೊಡಗಿರುವ ಇವರ ಕಾರ್ಯ ಶ್ಲಾಘನೀಯ’ ಎಂದರು.
ಪತ್ರಿಕಾ ವಿತರಕರಾದ ಬಾಲಾಜಿ, ಉಮೇಶ್, ಮಂಜು, ಶಿಕ್ಷಕಿ ಯಶೋದಾ ಹಾಗೂ ಪತ್ರಿಕೆ ಸರಬರಾಜು ಮಾಡುವ ವಾಹನ ಚಾಲಕರನ್ನು ಸನ್ಮಾನಿಸಲಾಯಿತು.
ಸಚಿನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಯಲಹಂಕ ಘಟಕದ ಅಧ್ಯಕ್ಷೆ ಹೇಮಲತ ಚಿದಾನಂದ ಅವರು, ಪತ್ರಿಕೆ ಹಾಕುವ ಹುಡುಗನಿಗೆ ₹ 10 ಸಾವಿರ ಪ್ರೋತ್ಸಾಹಧನದ ಚೆಕ್ ವಿತರಿಸಿದರು.
ಸಂಘದ ಪದಾಧಿಕಾರಿಗಳಾದ ಶಂಕರ್, ವೈ.ಸಿ.ವೀರಭದ್ರ, ಪ್ರದೀಪ್, ವೆಂಕಟೇಶಮೂರ್ತಿ, ವೀರೇಶ್, ಸೋನು, ಸಂತೋಷ್, ಆರಾಧ್ಯಾ, ಶಶಿ, ರವಿ, ನಾಗಾರ್ಜುನ್, ಕುಮಾರ್, ಮುತ್ತುರಾಜ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.