ಬೆಂಗಳೂರು: ‘ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದು’ ಎಂದು ಜಲಮಂಡಳಿ ಭರವಸೆ ನೀಡಿದೆ.
ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಬುಧವಾರ ಈ ಕುರಿತು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಲಮಂಡಳಿಯ ಮುಖ್ಯ ಎಂಜಿನಿಯರ್ (ಪಶ್ಚಿಮ) ದೇವರಾಜು, ‘ಜೂನ್ ತಿಂಗಳವರೆಗೆ ಪೂರೈಸುವಷ್ಟು ನೀರಿನ ಸಂಗ್ರಹ ಇದೆ. ನೀರು ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ಬೇಸಿಗೆಯಲ್ಲಿ ಹೆಚ್ಚು. ಬೇಸಿಗೆ ನೀರಿನ ಸಮಾನ ಹಂಚಿಕೆಗೆ ಆಗುವಂತೆ ನೊಡಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿ ವಹಿಸಲಾಗುತ್ತದೆ. ಫೆಬ್ರುವರಿ ಮಧ್ಯದಿಂದಲೇ ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಕೆಗೆ ಕ್ರಮಕೈಗೊಳ್ಳಲಿದ್ದೇವೆ’ ಎಂದರು.
ಕೆರೆಗಳಿಗೆ ರಾಜಕಾಲುವೆಗಳಿಗೆ ಒಳಚರಂಡಿಯ ಕೊಳಚೆ ನೀರು ಹರಿಸುವುದನ್ನು ಯಾವಾಗ ನಿಲ್ಲಿಸುತ್ತೀರಿ ಎಂದು ಮೇಯರ್ ಪ್ರಶ್ನಿಸಿದರು.
‘ಕೆರೆ ಹಾಗೂ ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವ 914 ಸ್ಥಳಗಳನ್ನು ಗುರುತಿಸಿದ್ದೇವೆ. ಇಂತಹ ಕಡೆ ₹ 72 ಕೋಟಿ ವೆಚ್ಚದಲ್ಲಿ ಕೊಳವೆಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ವರ್ಷದ ಅಂತ್ಯದೊಳಗೆ ಕೆರೆ ಹಾಗೂ ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವುದನ್ನು ಸಂಪೂರ್ಣ ಹತೋಟಿಗೆ ತರುತ್ತೇವೆ’ ಎಂದು ದೇವರಾಜು ಭರವಸೆ ನೀಡಿದರು.
‘110 ಹಳ್ಳಿಗಳಲ್ಲಿ ಜಲಮಂಡಳಿ ಕುಡಿಯುವ ನೀರು ಪೂರೈಕೆಗೆ ಹಾಗೂ ಒಳಚರಂಡಿ ಕೊಳವೆ ಅಳವಡಿಸಲು ರಸ್ತೆ ಅಗೆದಿದೆ. ಆದರೆ, ದುರಸ್ತಿಪಡಿಸಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ದೂಳು. ಯಾರಿಗೆ ಹೇಳುವುದು ನಮ್ಮ ಗೋಳು’ ಎಂದು ಅನೇಕ ಸದಸ್ಯರು ಅಳಲು ತೋಡಿಕೊಂಡರು.